ADVERTISEMENT

ಎಸ್‍ಸಿ, ಎಸ್‍ಟಿ ಕುಂದುಕೊರತೆ ಸಭೆ ಬಹಿಷ್ಕರಿಸಿದ ಮುಖಂಡರು

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2021, 16:21 IST
Last Updated 27 ಅಕ್ಟೋಬರ್ 2021, 16:21 IST
ಸುರಪುರ ಪೊಲೀಸ್ ಠಾಣೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಭೆಯನ್ನು ಬಹಿಷ್ಕರಿಸಿ ಹೊರಬಂದ ಮುಖಂಡರನ್ನು ಪೊಲೀಸ್ ಅಧಿಕಾರಿಗಳು ಮನವೊಲಿಸುತ್ತಿರುವ ದೃಶ್ಯ
ಸುರಪುರ ಪೊಲೀಸ್ ಠಾಣೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಭೆಯನ್ನು ಬಹಿಷ್ಕರಿಸಿ ಹೊರಬಂದ ಮುಖಂಡರನ್ನು ಪೊಲೀಸ್ ಅಧಿಕಾರಿಗಳು ಮನವೊಲಿಸುತ್ತಿರುವ ದೃಶ್ಯ   

ಸುರಪುರ: ಪರಿಶಿಷ್ಟ ದಿನಾಚರಣೆ ನಿಮಿತ್ತ ಸುರಪುರ ಪೊಲೀಸ್ ಉಪವಿಭಾಗದಿಂದ ನಗರದ ಪೊಲೀಸ್ ಠಾಣೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಎಸ್‍ಸಿ, ಎಸ್‍ಟಿ ಕುಂದುಕೊರತೆ ಸಭೆಯನ್ನು ಪರಿಶಿಷ್ಟ ಮುಖಂಡರು ಬಹಿಷ್ಕರಿಸಿದ ಘಟನೆ ನಡೆಯಿತು. ‌

ಸಭೆಯ ಆರಂಭದಲ್ಲಿ ಮಾತನಾಡಿದ ಮುಖಂಡರು, ‘ಕಳೆದ ಎರಡು ವರ್ಷಗಳಿಂದ ಯಾದಗಿರಿ ಜಿಲ್ಲೆ ಮತ್ತು ಸುರಪುರ ಉಪ ವಿಭಾಗದಲ್ಲಿ ಪರಿಶಿಷ್ಟರ ಮೇಲೆ ಸಾಕಷ್ಟು ದೌರ್ಜನ್ಯಗಳು ನಡೆದರೂ ಸೂಕ್ತ ಕ್ರಮ ಕೈಗೊಂಡು ನ್ಯಾಯ ಒದಗಿಸಿಕೊಡುವಲ್ಲಿ ಇಲಾಖೆ ವಿಫಲವಾಗಿದೆ’ ಎಂದು ಆರೋಪಿಸಿದರು.

‘ಜಿಲ್ಲೆಯಲ್ಲಿ ಪರಿಶಿಷ್ಟರ ಮೇಲೆ ಅನ್ಯಾಯ ನಡೆದಾಗ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಸಭೆಯಲ್ಲಿ ಭಾಗವಹಿಸುವುದಿಲ್ಲ’ ಎಂದು ಸಭೆಯಿಂದ ಹೊರ ನಡೆದರು.

ADVERTISEMENT

ಪೊಲೀಸ್ ಅಧಿಕಾರಿಗಳು ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಬನ್ನಿ ಕುಳಿತುಕೊಂಡು ಆಗುತ್ತಿರುವ ಸಮಸ್ಯೆಗಳನ್ನು ಚರ್ಚಿಸೋಣ ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು. ಆದರೆ, ಮುಖಂಡರು ತಮ್ಮ ಪಟ್ಟು ಸಡಿಲಿಸಲಿಲ್ಲ. ಪರಿಶಿಷ್ಟರ ಮೇಲೆ ದೌರ್ಜನ್ಯವೆಸಗಿರುವ ಆರೋಪಿಗಳನ್ನು ಬಂಧಿಸಬೇಕು. ಅಲ್ಲಿಯವರೆಗೆ ಸಭೆಗೆ ಬರುವುದಿಲ್ಲ ಎಂದು ಹೇಳುತ್ತಾ ಠಾಣೆಯಿಂದ ಹೊರ ನಡೆದರು.

ಮುಖಂಡರಾದ ಚಂದ್ರಶೇಖರ ಜಡಿಮರಳ, ನಾಗಣ್ಣ ಕಲ್ಲದೇವನಹಳ್ಳಿ, ರಾಹುಲ್ ಹುಲಿಮನಿ, ಭೀಮರಾಯ ಸಿಂದಗೇರಿ, ವೆಂಕೋಬ ದೊರೆ, ವೆಂಕಟೇಶ ಹೊಸಮನಿ, ಶಿವಲಿಂಗ ಹಸನಾಪುರ, ನಿಂಗಣ್ಣ ಗೋನಾಲ, ಭೀಮಾಶಂಕರ್ ಬಿಲ್ಲವ್, ವೀರಭದ್ರ ತಳವಾರಗೇರಾ, ಮಾಳಪ್ಪ ಕಿರದಳ್ಳಿ, ರಾಮಣ್ಣ ಶೆಳ್ಳಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.