ಶಹಾಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆ ನೆರೆ ಮಹಾರಾಷ್ಟ್ರ, ಪಶ್ಚಿಮ ಬಂಗಾಳದಿಂದ ಮಹಿಳಾ ಕೂಲಿ ಕಾರ್ಮಿಕರು ಕೂಲಿ ಅರಿಸಿ ಭತ್ತ ನಾಟಿಗೆ ಪಟ್ಟಣದತ್ತ ಹೆಜ್ಜೆ ಹಾಕುತ್ತಿದ್ದಾರೆ.
ತಾಲ್ಲೂಕಿನ ಮಳೆ ಆಶ್ರಿತ ಪ್ರದೇಶದ ಬಡ ಜನರು ಕೂಲಿಗಾಗಿ ನೆರೆ ಮಹಾರಾಷ್ಟ್ರ ಹಾಗೂ ಬೆಂಗಳೂರಿಗೆ ಗುಳೆ ಹೋಗುತ್ತಿದ್ದರೆ, ನೆರೆ ರಾಜ್ಯದ ಜನರು ಕೃಷ್ಣಾಅಚ್ಚುಕಟ್ಟು ಪ್ರದೇಶಕ್ಕೆ ಬರುತ್ತಿರುವುದು ವಿಶೇಷ.
ನೀರಾವರಿ ಪ್ರದೇಶದಲ್ಲಿನ ಜಮೀನುಗಳ ಗ್ರಾಮದ ಹೆದ್ದಾರಿಗೆ ಹೊಂದಿಕೊಂಡು ಜಾಗದಲ್ಲಿ ತಾತ್ಕಾಲಿಕ ಪ್ಲಾಸ್ಟಿಕ್ ಹೊದಿಕೆಯ ಗುಡಿಸಲು ನಿರ್ಮಿಸಿಕೊಂಡು ಬೆಳಿಗ್ಗೆ 6 ಗಂಟೆಗೆ ಗದ್ದೆಗೆ ಇಳಿದು ಭತ್ತ ನಾಟಿಗೆ ಅಣಿಯಾಗಿ ಸಂಜೆ 7 ಗಂಟೆಯವರೆಗೆ ಕತ್ತಲದ ನಡುವೆ ಭತ್ತ ನಾಟಿ ಮಾಡುತ್ತಾರೆ.
ಕೆಲಸ ನಿರ್ವಹಿಸುವ ಕೂಲಿಕಾರ್ಮಿಕರಿಗೆ ಅವರಲ್ಲಿಯೇ ಒಬ್ಬ ವ್ಯಕ್ತಿ ಊಟ ಸಿದ್ಧಪಡಿಸಿ ಸ್ಥಳಕ್ಕೆ ತೆಗೆದುಕೊಂಡು ಹೋಗುತ್ತಾರೆ. ಪುರುಷ ಕಾರ್ಮಿಕರು ಟ್ರ್ಯಾಕ್ಟರ್ ಮೂಲಕ ಭತ್ತದ ಸಸಿಗಳನ್ನು ಗದ್ದೆಯಲ್ಲಿ ತಂದು ಹಾಕುವ ಕೆಲಸ ಮಾಡುತ್ತಾರೆ ಎಂದು ಮಹಾರಾಷ್ಟ್ರದ ಕೂಲಿ ಕಾರ್ಮಿಕ ರಾಜು ಹೇಳುತ್ತಾರೆ.
‘150ಕ್ಕೂ ಹೆಚ್ಚು ಮಹಿಳೆಯರು ಬಂದಿದ್ದೇವೆ. ಒಂದು ತಿಂಗಳು ಭತ್ತ ನಾಟಿ ಮಾಡಿ ಮತ್ತೆ ನಮ್ಮ ಊರಿಗೆ ಮರಳುತ್ತೇವೆ. ಮಳೆ, ಚಳಿ ಎನ್ನದೆ ಭತ್ತ ನಾಟಿ ಮಾಡಿದರೆ ₹25 ಸಾವಿರಕ್ಕೂ ಹೆಚ್ಚು ಸಿಗುತ್ತದೆ’ ಎಂದು ಮಹಾರಾಷ್ಟ್ರದಿಂದ ಬಂದ ಕಾರ್ಮಿಕ ಮಹಿಳೆ ರಮಾದೇವಿ ಹೇಳುತ್ತಾರೆ.
‘ನಮ್ಮ ಪ್ರದೇಶದ ಕೂಲಿ ಕಾರ್ಮಿಕರು ನೆರೆ ರಾಜ್ಯದ ಕೂಲಿ ಕಾರ್ಮಿಕರಂತೆ ಶ್ರಮವಹಿಸಿ ಕೆಲಸ ಮಾಡುವುದಿಲ್ಲ. ಅದಕ್ಕಾಗಿ ಗುತ್ತಿಗೆ ರೂಪದಲ್ಲಿ ಗದ್ದೆಯನ್ನು ಭತ್ತ ನಾಟಿಗೆ ನೀಡಿ ಬಿಡುತ್ತೇವೆ’ ಎನ್ನುತ್ತಾರೆ ಕೊಂಗಂಡಿ ಗ್ರಾಮದ ಹಣಮಂತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.