ವಡಗೇರಾ: ತಾಲ್ಲೂಕಿನ ಯಕ್ಷಿಂತಿ ಗ್ರಾಮದ ಪರಿಶಿಷ್ಟ ಜಾತಿ ವಾರ್ಡಿನ ನಿವಾಸಿಗಳು ಕೊಳಚೆ ನೀರನ್ನು ಕುಡಿಯಲು ಬಳಸುವಂತಾಗಿದೆ.
ವಾರ್ಡ್ನಲ್ಲಿರುವ ನೀರಿನ ಪೈಪ್ಗಳು ಒಡೆದು, ಅವುಗಳಲ್ಲಿ ಚರಂಡಿಯ ನೀರು ಸೇರುತ್ತಿದೆ. ಈ ಕುರಿತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಮನಕ್ಕೂ ತಂದರೂ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.
ಚರಂಡಿಗಳಲ್ಲಿ ಹೂಳು ತುಂಬಿ ದುರ್ನಾತ ಬೀರುತ್ತಿವೆ. ಅವುಗಳಲ್ಲಿರುವ ತ್ಯಾಜ್ಯ ಹೊರತೆಗೆದಿಲ್ಲ. ಚರಂಡಿಯ ನೀರು ಕುಡಿಯುವ ನೀರು ಪೂರೈಸುತ್ತಿರುವ ಪೈಪ್ಗಳಲ್ಲಿ ಸೇರುತ್ತಿದೆ. ಅಶುದ್ಧ ನೀರಿನ ಪೂರೈಕೆಯಿಂದ ಗ್ರಾಮಸ್ಥರು ಅನಾರೋಗ್ಯದ ಭೀತಿ ಎದುರಿಸುತ್ತಿದ್ದಾರೆ.
‘ನಮ್ಮ ವಾರ್ಡ್ನಲ್ಲಿ ಹೊಸ ಪೈಪ್ಲೈನ್ ಅಳವಡಿಸಲು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮದ ನಿವಾಸಿ ನಿಂಗಣ್ಣ ಕರಡಿ ಮನವಿ ಮಾಡಿದ್ದಾರೆ.
‘ಯಕ್ಷಿಂತಿ ಗ್ರಾಮದ ನೀರಿನ ಸಮಸ್ಯೆಯನ್ನು ಗ್ರಾಮಕ್ಕೆ ಭೇಟಿ ನೀಡಿ ನೋಡಿಕೊಂಡು ಬಂದಿದ್ದೇನೆ. ಅದು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಗೆ ಸಂಬಂಧಿಸಿದೆ. ಈ ಕುರಿತು ಅವರ ಜತೆ ಮಾತನಾಡಿದ್ದೇವೆ. ಸದ್ಯ ಪೈಪ್ ಸರಿಪಡಿಸಲು ಸಾಮಗ್ರಿಗಳನ್ನು ಕೊಡಿಸಲಾಗಿದೆ ಎಂದು ಹೈಯಾಳ ಬಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುನಂದಾ ಮಾಹಿತಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.