ಶಹಾಪುರ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ಯಕ್ಷಿಂತಿ ಗ್ರಾಮದ ಸಮೀಪ ಕೃಷ್ಣಾ ನದಿಯಲ್ಲಿ ಶನಿವಾರ ಕುರಿಗಳ ಮೈ ತೊಳೆಯುತ್ತಿದ್ದ ವೇಳೆ ಮೊಸಳೆ ದಾಳಿಯಿಂದ ಕುರಿಗಾಹಿಯೊಬ್ಬರು ಮೃತಪಟ್ಟಿದ್ದು, ಅವರ ಶವ ಭಾನುವಾರ ಬೆಳಿಗ್ಗೆ 7ಕ್ಕೆ ಪತ್ತೆಯಾಗಿದೆ.
ತಾಲ್ಲೂಕಿನ ಶಾರದಹಳ್ಳಿ ಗ್ರಾಮದ ಲಕ್ಷ್ಮಣ ಭೀಮಣ್ಣ (45) ಮೃತರು. ಅವರಿಗೆ ಪತ್ನಿ ,ನಾಲ್ವರು ಮಕ್ಕಳಿದ್ದಾರೆ.
‘ಶವ ಪತ್ತೆಗಾಗಿ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಶನಿವಾರ ರಾತ್ರಿಯವರೆಗೆ ಶೋಧ ನಡೆಸಿದ್ದರು. ಪುನಃ ಭಾನುವಾರ ಕಾರ್ಯಾಚರಣೆ ನಡೆಸಿದ ಬಳಿಕ ಶವ ಪತ್ತೆಯಾಗಿದೆ’ ಎಂದು ಗ್ರೇಡ್–2 ತಹಶೀಲ್ದಾರ್ ಪ್ರಕಾಶ ಹೊಸಮನಿ ತಿಳಿಸಿದರು.
‘ಶನಿವಾರ ಮಧ್ಯಾಹ್ನ 12ರ ಸುಮಾರಿಗೆ ತಂದೆ ಲಕ್ಷ್ಮಣ ಅವರು ಕುರಿಗಳ ಮೈತೊಳೆಯುತ್ತಿದ್ದ ವೇಳೆ ಮೊಸಳೆ ದಾಳಿ ಮಾಡಿತು. ನಮ್ಮ ತಂದೆಯವರು ಅದರ ಬಾಯಿಯಿಂದ ತಪ್ಪಿಸಿಕೊಳ್ಳಲು ಹೋರಾಟ ನಡೆಸಿದರು. ದೋತರ ಬಿಚ್ಚಿ, ಮೊಸಳೆಯ ದಿಕ್ಕು ತಪ್ಪಿಸಲು ಯತ್ನಿಸಿದರು. ಮೂರು ಬಾರಿ ಪಲ್ಟಿ ಹೊಡೆದ ಮೊಸಳೆಯು ತಂದೆಯವರನ್ನು ಎಳೆದುಕೊಂಡು ನೀರಿನೊಳಗೆ ಹೋಯಿತು. ಎಷ್ಟೇ ಪ್ರಯತ್ನಿಸಿದರೂ ಅವರನ್ನು ರಕ್ಷಿಸಿಕೊಳ್ಳಲು ಆಗಲಿಲ್ಲ’ ಎಂದು ಲಕ್ಷ್ಮಣ ಅವರ ಪುತ್ರ ತಾಯಪ್ಪ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.