
ಶಹಾಪುರ: ಗ್ರಾಮೀಣ ಭಾಗಗಳಲ್ಲಿ ಮೂಲ ಸೌಕರ್ಯ ಒದಗಿಸುವ ಉದ್ದೇಶದಿಂದ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಅದರಂತೆ ತಾಲ್ಲೂಕಿನ ಸಲಾದಪುರ- ಹಜರತ್ ಮರ್ದಾನ ಸಾಹೇಬ ದರ್ಗಾದವರೆಗೆ ₹ 1.5 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಿಸಲಾಗುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.
ತಾಲ್ಲೂಕಿನ ಸಲಾದಪುರ ಗ್ರಾಮದಿಂದ ಹಜರತ್ ಮರ್ದಾನ ಸಾಹೇಬ ದರ್ಗಾದವರೆಗೆ ರಸ್ತೆ ನಿರ್ಮಾಣ ಕಾಮಗಾರಿ ಉದ್ಘಾಟಿಸಿ ಅವರು ಮಾತನಾಡಿದರು.
‘ನಗರದಿಂದ ಶಿರವಾಳ ವರೆಗೆ ರಸ್ತೆ ನಿರ್ಮಾಣಕ್ಕೆ ₹ 14 ಕೋಟಿ ಅನುದಾನ ಬಂದಿದೆ. ಅಲ್ಲದೆ ಶಿರವಾಳ ದಿಂದ ಹೊಸೂರ ವರೆಗೆ ₹ 7 ಕೋಟಿ ಅನುದಾನ ಮಂಜೂರು ಆಗಿದೆ. ಶೀಘ್ರದಲ್ಲಿ ರಸ್ತೆ ಕಾಮಗಾರಿಗಾಗಿ ಟೆಂಡರ್ ಕರೆಯಲಾಗುವುದು. ಅಲ್ಲದೆ ಮಕ್ತಾಪುರ ಗ್ರಾಮದಲ್ಲಿ ಹಜರತ್ ಮನಸೂರ ಅಲಿ ದರ್ಗಾಕ್ಕೆ ₹ 15 ಲಕ್ಷ ಅನುದಾನ ಅನುದಾನ ಬಂದಿದೆ. ಎಲ್ಲಾ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಆರಂಭಿಸಲಾಗುವುದು’ ಎಂದರು.
ರಾಜ್ಯ ಮಧ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಮಾತನಾಡಿ, ‘ಗ್ರಾಮೀಣ ಭಾಗದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಸಚಿವ ದರ್ಶನಾಪುರ ಪ್ರತಿ ಗ್ರಾಮದ ಸಮಸ್ಯೆಯನ್ನು ತಾಳ್ಮೆಯಿಂದ ಆಲಿಸಿ ಬಗೆಹರಿಸುವ ಸರಳ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ’ ಎಂದರು.
ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಅಮಾತೆಪ್ಪ ಕಂದಕೂರ, ಅಲ್ಲಾ ಪಟೇಲ್, ಇಬ್ರಾಹಿಂ ಸಾಬ್ ಪೀರಾ, ಯಲ್ಲಪ್ಪ ನರಿ, ಮನುಭೂಪಾಲ್ ರೆಡ್ಡಿ, ಸಿದ್ದಪ್ಪ ಪೂಜಾರಿ, ಮರ್ದಾನೆಪ್ಪ ಸಲಾದಪುರ, ಅಮರೇಶ ವಿಭೂತಿಹಳ್ಳಿ, ಮಲ್ಲಣ್ಣ ಉಳ್ಳಂಡಗೇರಿ ಭೀಮಾಶಂಕರ ಹುಲಕಲ್, ಮಾಳಪ್ಪ ಸಲಾದಪುರ,ಗುರು ಬಾಣತಿಹಾಳ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.