ಯಾದಗಿರಿ: ಜಿಲ್ಲೆಯ ಶಹಾಪುರ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರು ಮೂರನೇ ಬಾರಿಗೆ ಸಚಿವರಾಗಿ ಅಧಿಕಾರ ಸ್ವೀಕರಿಸಿದರು.
ಈ ಮೂಲಕ ಜಿಲ್ಲೆಗೆ ಕಳೆದ 6 ವರ್ಷದ ನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವಗಿರಿ ಸಿಕ್ಕಿದೆ.
ಬೆಂಗಳೂರಿನ ಗಾಜಿನ ಭವನದಲ್ಲಿ ಶನಿವಾರ ದೇವರ ಹೆಸರಿನಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಪ್ರಮಾಣ ವಚನ ಬೋಧಿಸಿದರು.
1994ರಲ್ಲಿ ಇಂಧನ ಸಚಿವ, 2006ರಲ್ಲಿ ಕೃಷಿ ಮಾರುಕಟ್ಟೆ ಸಚಿವರಾಗಿ ಈಗಾಗಲೇ ಎರಡು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಇರುವ ದರ್ಶನಾಪುರ ಅವರು ಶಹಾಪುರ ಮತಕ್ಷೇತ್ರದಿಂದ 5ನೇ ಬಾರಿಗೆ ಗೆಲುವು ಸಾಧಿಸಿದ್ದಾರೆ.
1994, 2004, 2008, 2018, 2023 ರಲ್ಲಿ ಒಟ್ಟು ಐದು ಬಾರಿ ಶಾಸಕರಾಗಿದ್ದಾರೆ.
ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಜಿಲ್ಲೆಯವರಿಗೆ ದಕ್ಕಿರಲಿಲ್ಲ. ಯಾದಗಿರಿ, ಸುರಪುರದಲ್ಲಿ ಬಿಜೆಪಿ ಶಾಸಕರಿದ್ದರೂ ನಿಗಮ ಮಂಡಳಿಗೆ ಮಾತ್ರ ತೃಪ್ತಿ ಪಡುವಂತೆ ಆಗಿತ್ತು.
ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲೆಗೆ ಸಚಿವ ಸ್ಥಾನ ನೀಡುವ ಮೂಲಕ ಮಂತ್ರಿಗಿರಿ ಬರ ನೀಗಿದೆ.
ಹೆಸರು: ಶರಣಬಸಪ್ಪಗೌಡ ದರ್ಶನಾಪುರ
ಮತಕ್ಷೇತ್ರ: ಶಹಾಪುರ (ಯಾದಗಿರಿ ಜಿಲ್ಲೆ)
ಪಕ್ಷ: ಕಾಂಗ್ರೆಸ್
ವಯಸ್ಸು: 63
ವಿದ್ಯಾರ್ಹತೆ: ಬಿ.ಇ.ಸಿವಿಲ್ ಎಂಜಿನಿಯರಿಂಗ್
ಪತ್ನಿ: ಭಾರತಿ ದರ್ಶನಾಪುರ (ಗೃಹಿಣಿ)
ಉದ್ಯೋಗ: ಒಕ್ಕಲುತನ, ವ್ಯಾಪಾರ
ಜಾತಿ: ರೆಡ್ಡಿ ಲಿಂಗಾಯತ
ಎಷ್ಟನೇ ಬಾರಿ ಶಾಸಕ: ಐದು ಬಾರಿ ಶಾಸಕ
ಹಿಂದೆ ನಿರ್ವಹಿಸಿದ್ದ ಖಾತೆ: ಇಂಧನ ಮತ್ತು ಕೃಷಿ ಮಾರುಕಟ್ಟೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.