ಶಹಾಪುರ/ವಡಗೇರಾ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ಸೂಗೂರ ಗ್ರಾಮದ ಪರಿಶಿಷ್ಟ ಪಂಗಡದ (ವಾಲ್ಮೀಕಿ ಸಮುದಾಯ) ಭೀಮಣ್ಣಗೌಡ ಹನುಮಗೌಡ ದೊರೆ ಅವರ ಏಕೈಕ ಕುಟುಂಬಕ್ಕೆ ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಇದರಿಂದ ಕುಟುಂಬದ ಸದಸ್ಯರು ಆತಂಕಗೊಂಡಿದ್ದಾರೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿಪತ್ರ ಸಲ್ಲಿಸಿರುವ ಕುಟುಂಬ ಸದಸ್ಯರು, ‘ನಮಗೆ ಸೂಕ್ತ ರಕ್ಷಣೆ ನೀಡಬೇಕು. ಬಹಿಷ್ಕಾರ ಹಾಕಿದ ವ್ಯಕ್ತಿಗಳ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಕೋರಿದ್ದಾರೆ.
‘ಗ್ರಾಮದಲ್ಲಿ ನನ್ನ ಕುಟುಂಬವಿದ್ದು, ಐವರು ಮಕ್ಕಳಿದ್ದಾರೆ. ಹಲವು ತಿಂಗಳ ಹಿಂದೆಯೇ ಗ್ರಾಮಸ್ಥರು ನಮ್ಮ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ. ಅಂಗಡಿಗೆ ತೆರಳಿದರೆ, ಕುಟುಂಬದ ಸದಸ್ಯರಿಗೆ ಯಾವ ವಸ್ತುಗಳನ್ನು ನೀಡದೇ ಅವಮಾನಿಸಲಾಗುತ್ತದೆ. ನನ್ನ ಜಮೀನುಗಳಿಗೆ ಯಾರೂ ಕೆಲಸಕ್ಕೆ ಬರುವುದಿಲ್ಲ. ದ್ವಿಚಕ್ರ ವಾಹನದಲ್ಲಿ ಹೊರಟರೆ, ಅವಾಚ್ಯ ಪದಗಳಿಂದ ನಿಂದಿಸುತ್ತಾರೆ. ದೈಹಿಕ ಮತ್ತು ಮಾನಸಿಕ ಕಿರುಕುಳದಿಂದ ತುಂಬಾ ನೋವು ಆಗಿದೆ’ ಎಂದು ಭೀಮಣ್ಣಗೌಡ ತಿಳಿಸಿದ್ದಾರೆ.
‘ಗ್ರಾಮದ ದಳಪತಿಯಾದ ನಾನು ಸಾಕಷ್ಟು ಅವಮಾನ ಸಹಿಸಿಕೊಂಡು ಕುಟುಂಬ ಸದಸ್ಯರೊಂದಿಗೆ ಜೀವನ ಸಾಗಿಸುತ್ತಿರುವೆ. ಯಾವ ಸಮಯದಲ್ಲಿ ನನ್ನ ಕುಟುಂಬದ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸುವುರೋ ಗೊತ್ತಿಲ್ಲ. ಅದರಲ್ಲಿ ಶಿವಪುರ ಗ್ರಾಮದ ಮರೆಪ್ಪ ತೋಟದಮನೆ ಎಂಬುವರು ನಮ್ಮ ಕುಟುಂಬವನ್ನು ಹೀಯಾಳಿಸಿ ನೋವುಂಟು ಮಾಡುತ್ತಿದ್ದಾರೆ. ಇದರ ಬಗ್ಗೆ ವಡಗೇರಾ ಠಾಣೆಗೆ ಸಾಕಷ್ಟು ಬಾರಿ ದೂರು ಸಲ್ಲಿಸಿದರೂ ಪೊಲೀಸರು ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
‘ಭೀಮಣ್ಣಗೌಡ ದೊರೆಯವರ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವುದು ಗಮನಕ್ಕೆ ಬಂದಿಲ್ಲ. ಇದನ್ನು ಗಂಭೀರವಾಗಿ ತೆಗೆದುಕೊಂಡು ಪರಿಶೀಲಿಸಲಾಗುವುದು’ ಎಂದು ವಡಗೇರಾ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಸಿದ್ದರಾಯ ಬಳೂರ್ಗಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.