ಶಹಾಪುರ: ವಿದ್ಯಾರ್ಥಿಗಳಿಗೆ ಜ್ಞಾನವನ್ನು ಪೂರೈಸುವುದರ ಜತೆಗೆ ವಿದ್ಯಾರ್ಥಿಗಳಲ್ಲಿ ಅಡಗಿರುವ ಸಾಹಿತ್ಯ, ಸಾಂಸ್ಕೃತಿಕ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಪ್ರಸಾರಾಂಗ ನಡೆಸಿದೆ ಎಂದು ರಾಯಚೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಹರೀಶ್ ರಾಮಸ್ವಾಮಿ ತಿಳಿಸಿದರು.
ತಾಲ್ಲೂಕಿನ ಭೀಮರಾಯನಗುಡಿ ವೀರಶೈವ ಕಲ್ಯಾಣ ಮಂಟಪದಲ್ಲಿ ಬುಧವಾರ ತಾಲ್ಲೂಕು ಕಸಾಪ, ಎನ್ಎಸ್ಎಸ್ ಘಟಕ, ವಲಯ ಕಸಾಪ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ’ವಿಶ್ವ ವಿದ್ಯಾಲಯದ ನಡೆ ಸಮುದಾಯದ ಕಡೆ' ರಾಯಚೂರು ವಿಶ್ವ ವಿದ್ಯಾಲಯ ಪ್ರಸಾರಾಂಗ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯ ಸೌಲಭ್ಯ ಒದಗಿಸಿದೆ. 2024ರಲ್ಲಿ ₹5ಲಕ್ಷ ವೆಚ್ಚದಲ್ಲಿ ಪ್ರಚಾರ ಉಪನ್ಯಾಸ ಮಾಲಿಕೆ ನಡೆಯುತ್ತಿದೆ. ಪುಸ್ತಕ, ಗ್ರಂಥಾಲಯ, ಪುಸ್ತಕ ಪ್ರಕಟಣೆಗಾಗಿ ಹೆಚ್ಚು ಒತ್ತು ನೀಡಲಾಗುವುದು ಎಂದರು.
ಲೇಖಕಿ ಶೈಲಜಾ ಬಾಗೇವಾಡಿ ಮಾತನಾಡಿ, ಸಮ ಸಮಾಜದ ಪರಿಕಲ್ಪನೆಯನ್ನು ಕಟ್ಟಿಕೊಟ್ಟುದ್ದು ಕಲ್ಯಾಣ ಕರ್ನಾಟಕ. 12ನೇ ಶತಮಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಶರಣರು ನೀಡಿದ್ದಾರೆ. ಗೋಗಿ ಚಂದಾಹುಸೇನಿ ದರ್ಗಾ, ತಿಂಥಣಿ ಮೌನೇಶ್ವರ ಹೀಗೆ ಸರ್ವಧರ್ಮದ ಸಮನ್ವತೆ ಸಗರನಾಡಿನಲ್ಲಿ ಗಟ್ಟಿಯಾಗಿ ನೆಲೆಸಿದೆ ಎಂದರು.
ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಶ್ರೀಶೈಲ್ ನಾಗರಾಳ, ಎಂ.ಬಿ.ಕಟ್ಟಿಮನಿ, ವಿಶ್ವ ವಿದ್ಯಾಲಯದ ಪ್ರಸಾರಾಂಗ ಸಲಹಾ ಸಮಿತಿ ಸದಸ್ಯ ದೇವೇಂದ್ರ ಹೆಗ್ಗಡೆ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ರವೀಂದ್ರನಾಥ ಹೊಸಮನಿ, ಸಿದ್ದಲಿಂಗಪ್ಪ ಆನೆಗುಂದಿ, ಸಿದ್ದರಾಮ ಹೊನಕಲ್, ಕಾಲೇಜಿನ ಪ್ರಾಚಾರ್ಯ ದೇವಿಂದ್ರಪ್ಪ ಮಡಿವಾಳಕರ್, ಶರಣಬಸವ ಬಿರಾದಾರ, ಪರಶುರಾಮ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.