ಸುರಪುರ: ತಾಲ್ಲೂಕಿನಲ್ಲಿ ಕಳೆದೆರಡು ದಿನ ಮತ್ತು ಮಂಗಳವಾರ ತಡರಾತ್ರಿ ಸುರಿದ ಅಕಾಲಿಕ ಮಳೆಗೆ ಸುರಪುರ, ಕೆಂಭಾವಿ ಮತ್ತು ಕಕ್ಕೇರಾ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿದೆ. 1,500 ಎಕರೆಗೂ ಅಧಿಕ ಬೆಳೆ ನಾಶವಾಗಿದೆ ಎಂದು ಅಂದಾಜಿಸಲಾಗಿದೆ.
ತಾಲ್ಲೂಕಿನ ಹೆಮನೂರ, ಕುಪಗಲ್ ಹೆಮ್ಮಡಗಿ, ಕರ್ನಾಳ, ಸೂಗೂರು, ದೇವಾಪುರ, ಶಾಂತಪುರ, ನಾಗರಾಳ, ಆಲ್ದಾಳ, ಶೆಳ್ಳಗಿ, ಮುಷ್ಠಳ್ಳಿ, ಕಕ್ಕೇರಾ ಸೇರಿದಂತೆ ಇತರೆ ಗ್ರಾಮಗಳಲ್ಲಿ ರಾಶಿ ಮಾಡಿ ಹಾಕಿದ್ದ ಭತ್ತ ಮಳೆ ನೀರಿನಿಂದ ಹಾಳಾಗಿದೆ. ಇನ್ನೂ ಕೆಲ ಕಡೆ ಕೊಯಿಲು ಹಂತದಲ್ಲಿದ್ದ ಭತ್ತ ಸಂಪೂರ್ಣವಾಗಿ ನೆಲಕ್ಕೆ ಮಲಗಿದೆ.
‘ಸುರಪುರ ಹೋಬಳಿಯ ಅರೆಕೇರಾ 1, ದೇವಿಕೇರಾ 2, ವಾಗಣಗೇರಾ 1, ವಾರಿಸಿದ್ದಾಪುರ-1 ದೇವರಗೋನಾಲ 1, ಬಿಜಾಸ್ಪುರ-1, ಕೆಂಭಾವಿ ಹೋಬಳಿಯ ಯಾಳಗಿ 8, ನಗನೂರು -3 ಒಟ್ಟು ತಾಲ್ಲೂಕಿನಲ್ಲಿ 18 ಮನೆಗಳು ಕುಸಿದಿವೆ. ಬೇವಿನಾಳ ಎಸ್.ಕೆ., ಶೆಳ್ಳಗಿ ಗ್ರಾಮದಲ್ಲಿ ತಲಾ ಒಂದೊಂದು ಎತ್ತು ಸಿಡಿಲಿಗೆ ಬಲಿಯಾಗಿವೆ’ ಎಂದು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ತಿಳಿಸಿದರು.
‘ಎಲ್ಲ ಗ್ರಾಮಗಳಿಗೆ ಭೇಟಿ ನೀಡಿದ್ದೇನೆ. ಭತ್ತ ನಾಶವಾಗಿದೆ. ಬಹುತೇಕ ಕಡೆ ಹೊಲಗಳಲ್ಲಿ ನೀರು ನಿಂತ್ತಿದ್ದು ಹತ್ತಿ ಮತ್ತು ಮೆಣಸಿನಕಾಯಿ ಹಾಗೂ ಇತರೆ ಬೆಳೆಗಳು ಹಾಳಾಗಿವೆ. ಕಂದಾಯ ಅಧಿಕಾರಿ ಮತ್ತು ಕೃಷಿ ಅಧಿಕಾರಿಗಳಿಗೆ ಹಾನಿಯನ್ನು ಸರ್ವೆ ಮಾಡಿ ವರದಿ ಒಪ್ಪಿಸಲು ಸೂಚಿಸಿದ್ದೇನೆ’ ಎಂದರು.
‘ಇವತ್ತಿನವರೆಗೆ ಲಭ್ಯವಾಗಿರುವ ಮಾಹಿತಿ ಅಂತಿಮವಲ್ಲ. ಇನ್ನಷ್ಟು ಹೆಚ್ಚಾಗಬಹುದು. ಸರ್ವೆ ಸಂಪೂರ್ಣ ಮುಗಿದ ನಂತರ ಸಮಗ್ರ ಮಾಹಿತಿ ಸಿಗಲಿದೆ. ವರದಿ ಜಿಲ್ಲಾಧಿಕಾರಿಗೆ ಸಲ್ಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಪರಿಹಾರ ಮಂಜೂರಾದಲ್ಲಿ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸಲಾಗುವುದು’ ಎಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ಗುರುನಾಥ, ಕೃಷಿ ಅಧಿಕಾರಿ ಡಾ. ಭೀಮರಾಯ ಹವಾಲ್ದಾರ, ಕಂದಾಯ ಅಧಿಕಾರಿಗಳಾದ ಗುರುಬಸಪ್ಪ ಪಾಟೀಲ, ವಿಠ್ಠಲ ಬಂದಾಳ, ಗ್ರಾಮ ಲೆಕ್ಕಿಗರಾದ ಪ್ರದೀಪ್ ಕುಮಾರ, ಶಿವುಕುಮಾರ, ದುಷ್ಯಂತ ಇದ್ದರು.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.