ಯಾದಗಿರಿ: ನಗರದ ಗಾಂಧಿ ವೃತ್ತದ ಪಂಪ ಮಹಾಕವಿ ಮಂಟಪದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ವತಿಯಿಂದ 65ನೇ ಕನ್ನಡ ರಾಜ್ಯೋತ್ಸವ ಹಾಗೂ ಕನ್ನಡಿಗರ ಗಡಿ ನಾಡ ಹಬ್ಬ ನಡೆಯಿತು.
ಸಾನ್ನಿಧ್ಯ ವಹಿಸಿದ್ದ ಹೆಡಗಿಮದ್ರ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಕನ್ನಡ ರಾಜ್ಯೋತ್ಸವ ಮನೆಮನಗಳಲ್ಲಿ ಜಾಗೃತವಾಗಬೇಕು. ಗಡಿ ಭಾಗದಲ್ಲಿ ಅನ್ಯ ಭಾಷೆಯನ್ನು ಮೆಟ್ಟಿನಿಂತು ಕನ್ನಡೀಕರಣಗೊಳಿಸಬೇಕು ಎಂದರು.
ಕನ್ನಡ ನಾಡು ಒಂದಾಗಲು ಆಲೂರು ವೆಂಕಟರಾಯರು ಸೇರಿದಂತೆ ಮಹಾನ್ ಕನ್ನಡಿಗರ ಅಪಾರ ಶ್ರಮ ಅಡಗಿದೆ. ಈ ನಿಟ್ಟಿನಲ್ಲಿ ಅವರು ಕಟ್ಟಿಕೊಟ್ಟ ಕನ್ನಡ ನಾಡನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಜೆಡಿಎಸ್ ರಾಜ್ಯ ಯುವ ಮುಖಂಡ ಶರಣಗೌಡ ಕಂದಕೂರು ಮಾತನಾಡಿ, ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮ ಘಟಕಗಳನ್ನು ರಚಿಸುವ ಮೂಲಕ ಗ್ರಾಮೀಣ ಪ್ರದೇಶದಲ್ಲಿನ ಜನರ ಸಮಸ್ಯೆಗಳಿಗೆ ದನಿಯಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡ ಶರಣಪ್ಪ ಮಾನೆಗಾರ ಮಾತನಾಡಿ, ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಕನ್ನಡದ ಪರಿಸ್ಥಿತಿ ತೀರಾ ಅತಂತ್ರವಾಗಿದ್ದು, ಗಡಿ ಭಾಗದಲ್ಲಿ ಇಂಥ ಸಮಾವೇಶಗಳನ್ನು ಮಾಡುವಂತೆ ಸಲಹೆ ನೀಡಿದರು.
ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಲಲಿತಾ ಅನಪೂರ,ಕರವೇ ತಾಲ್ಲೂಕು ಅಧ್ಯಕ್ಷ ಮಲ್ಲು ಮಾಳಿಕೇರಿ, ಬಿಜೆಪಿ ಮುಖಂಡ ದೇವೇಂದ್ರನಾಥ, ಜಿಲ್ಲಾ ಪಂಚಾಯಿತಿ ಸದಸ್ಯ ಮರಲಿಂಗಪ್ಪ ಕರ್ನಾಳ ಮಾತನಾಡಿದರು.
ವೇದಿಕೆ ಮೇಲೆ ಜಿಲ್ಲಾ ಕಾಂಗ್ರೆಸ್ ಮುಖಂಡ ಬಸ್ಸುಗೌಡ ಬಿಳ್ಹಾರ, ಮಾಣಿಕ್ಯಪ್ಪಗೌಡ ಬೀರನಕಲ್, ಅನಿಲ್ ಹೆಡಗಿಮದ್ರ, ರಜನಿಕಾಂತ ಕಟ್ಟಾ, ಸುರೇಶ ಅಲ್ಲಿಪುರ, ಮಹೇಶ ಅವಂಟಿ, ನಿಂಗಪ್ಪ ಜಾಲಗಾರ, ಬಸವರಾಜ ಪಡುಕೋಟೆ, ಮಹಾವೀರ ಲಿಂಗೇರಿ, ಅಂಬ್ರೇಷ್ ಹತ್ತಿಮನಿ, ವಿಶ್ವಾರಾದ್ಯ ದಿಮ್ಮೆ, ವೆಂಕಟೇಶ ಬೈರಿಮರಡಿ, ಅಬ್ದುಲ್ ಚಿಗಾನೂರು, ಶಿವಲಿಂಗ ಪಡಶೆಟ್ಟಿ, ಸಾಹೇಬಗೌಡ ನಾಯಕ, ರಿಯಾಜ್ ಪಟೇಲ್, ಸೈದಪ್ಪ ಗೌಡಗೇರಾ, ದೇವಸಿಂಗ್ ಮಾಧ್ವಾರ, ಮಹೇಶ ಠಾಣಗುಂದಿ ಸೇರಿದಂತೆ ಕರವೇ ಕಾರ್ಯಕರ್ತರು ಇದ್ದರು.
ಶರಣು ಗಡೇದ ನಿರೂಪಿಸಿದರು. ಸಿದ್ದು ನಾಯಕ ಹತ್ತಿಕುಣಿ ವಂದಿಸಿದರು. ಕಲಾವಿದರಾದ ಉಮಾ ವೈಜಿ, ಮೋನಮ್ಮ ಇವರಿಂದ ಕನ್ನಡ ಗೀತೆಗಳ ಸಾಂಸ್ಕೃತಿಕ ಕಾರ್ಯಕ್ರಮ ನೆರೆದಿದ್ದ ಜನಮನ ಸೂರೆಗೊಂಡಿತು.
***
ಅಭಿವೃದ್ಧಿ ವಿಷಯ ಬಂದಾಗ ಎಲ್ಲ ಪಕ್ಷದ ನಾಯಕರನ್ನು ಬೆಂಬಲಿಸುತ್ತೇವೆ. ಅಭಿವೃದ್ಧಿಗೆ ನಿರ್ಲಕ್ಷ್ಯ ತೋರಿಸಿದರೆ ಹೋರಾಟ ಮಾಡುತ್ತೇವೆ
ಟಿ.ಎನ್. ಭೀಮುನಾಯಕ, ಕರವೇ ಜಿಲ್ಲಾಘಟಕದ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.