
ವಡಗೇರಾ: ‘ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪಂಚಾಯಿತಿಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಕಡ್ಡಾಯವಾಗಿ ಕರ ವಸೂಲಿ ಅಭಿಯಾನದಲ್ಲಿ ಭಾಗವಹಿಸಿ ಕರ ವಸೂಲಿ ಅಭಿಯಾನವನ್ನು ಯಶಸ್ವಿಗೊಳಿಸಿ’ ಎಂದು ತಾಪಂ ಇಒ ಮಲ್ಲಿಕಾರ್ಜುನ ಸಂಗ್ವಾರ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲ್ಲೂಕಿನ ವ್ಯಾಪ್ತಿಯ ಪಿಡಿಒ, ಕಾರ್ಯದರ್ಶಿ ಹಾಗೂ ಕರವಸೂಲಿಗಾರರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಇದೇ ಜ.19ರ ಸೋಮವಾರದಂದು ವಿಶೇಷ ಕರ ವಸೂಲಿ ಅಭಿಯಾನ ಜರುಗಲಿದ್ದು ಅಂದು ಪ್ರಾಂಜಲವಾದ ಮನಸ್ಸನಿಂದ ಗ್ರಾಪಂ ಸಿಬ್ಬಂದಿ ಕರ ವಸೂಲು ಅಭಿಯಾನದಲ್ಲಿ ಭಾಗವಹಿಸಿ ಮನೆ ಮಾಲೀಕರ ಹಾಗೂ ಅಂಗಂಡಿ ಮಾಲೀಕರ ಮನ ಒಲಿಸಿ ಪ್ರತಿ ಪಂಚಾಯತಿಯಿಂದ ಕನಿಷ್ಠ 3 ಲಕ್ಷ ತೆರಿಗೆ ವಸೂಲಿ ಮಾಡಬೇಕು’ ಎಂದು ತಿಳಿಸಿದರು.
‘ಬೇಸಿಗೆ ಕಾಲ ಆರಂಭವಾಗುತಿದ್ದು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರು, ಸ್ವಚ್ಚತೆ, ನೈರ್ಮಲ್ಯಕ್ಕೆ ಹೆಚ್ಚಿನ ಗಮನವನ್ನು ಹರಿಸಬೇಕು. ಹಾಗೆಯೆ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು’ ಎಂದರು.
‘ಶಾಲಾ ಅಭಿವೃದ್ಧಿ ಕಾಮಗಾರಿಗಳನ್ನು ಕಾಲಮಿತಿ ಒಳಗೆ ಪೂರ್ಣಗೊಳಿಸಬೇಕು. ನರೇಗಾ ಯೋಜನೆಯಡಿ ಕೂಲಿಕಾರರಿಗೆ ಸಕಾಲದಲ್ಲಿ ಕೆಲಸ ನೀಡಿ ಅತಿ ಹೆಚ್ಚು ಜನರಿಗೆ ಕೂಲಿ ನೀಡುವುದಕ್ಕೆ ಪಿಡಿಒಗಳು ಕ್ರಮಗಳನ್ನು ಕೈಗೊಳ್ಳಬೇಕು. ಯಾವುದೆ ಕಾರಣಕ್ಕೂ ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಮರಳಬಾರದು’ ಎಂದರು.
‘ಪಂಚಾಯಿತಿಯಲ್ಲಿ ಇರುವ ತ್ಯಾಜ್ಯ ಸಂಗ್ರಹಿಸುವ ವಾಹನದ ಮೂಲಕ ಮನೆಗಳಿಂದ ಕಸವನ್ನು ಸಂಗ್ರಹಿಸಿ ನಿಗದಿ ಪಡಿಸಿದ ಸ್ಥಳಗಳಲ್ಲಿ ಅದನ್ನು ವಿಲೇವಾರಿ ಮಾಡಬೇಕು’ ಎಂದು ಸೂಚಿಸಿದರು.
ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಲೆಕ್ಕಾಧಿಕಾರಿ ರವೀಂದ್ರ, ತಾಲ್ಲೂಕು ಯೋಜನೆ ಅಧಿಕಾರಿ ಶಶಿಧರ, ತಾಲ್ಲೂಕು ಸಂಯೋಜಕ ರವೀಂದ್ರ ದೇಸಾಯಿ, ಪಿಡಿಒ ಗಳಾದ ಶರಣಗೌಡ ಬಿ ಉಳ್ಳೆಸೂಗುರು, ಬಸವಂತ್ರಾಯಗೌಡ, ಸಿದ್ದವೀರಪ್ಪ, ಚನ್ನಪ್ಪ ನಾಯಕ, ಕಿರಣಬಾಬು, ಸಿಬಿ ಪಾಟೀಲ್, ಶಿವರಾಜ, ಭಾಷಾಸಾಬ ಮುಲ್ಲಾ, ಶಿವಕುಮಾರ, ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.