ಗುರುಮಠಕಲ್: ಸಮೀಪದ ಕಾಕಲವಾರ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಬಾಲಕನ ಮೃತ ದೇಹ ಪತ್ತೆಯಾಗಿದೆ.
ಕಾಕಲವಾರ ಗ್ರಾಮದ ನರೇಂದ್ರ ನಾಯ್ಕೋಡಿ (11) ಮೃತ ಬಾಲಕ. ಸೋಮವಾರ ಸಂಜೆ ಶಾಲೆಯಿಂದ ಮನೆಗೆ ಹಿಂದಿರುಗಿದ ನಂತರ ಅದೇ ಗ್ರಾಮದಲ್ಲಿರುವ ಅತ್ತೆ ಮನೆಯಲ್ಲಿ ಬಿಟ್ಟಿರುವ ಚಪ್ಪಲಿ ಹಾಕಿಕೊಂಡು ಬರುವುದಾಗಿ ಹೇಳಿ ಹೋಗಿದ್ದ ಬಾಲಕ ರಾತ್ರಿಯಾದರೂ ಮನೆಗೆ ಹಿಂದಿರುಗಿರಲಿಲ್ಲ. ಗಾಬರಿಗೊಂಡು ಗ್ರಾಮದಲ್ಲಿ ಹುಡುಕಾಡುವಾಗ ಗ್ರಾಮದ ಹಳೆಯ ಮನೆಯೊಂದರ ಕೊಟ್ಟಿಗೆಯಲ್ಲಿ ಮಗನ ಮೃತದೇಹ ಪತ್ತೆಯಾಗಿದೆ ಎಂದು ತಾಯಿ ಗೋವಿಂದಮ್ಮ ನಾಯ್ಕೋಡಿ ದೂರಿನಲ್ಲಿ ತಿಳಿಸಿದ್ದಾರೆ.
ಬಾಲಕನ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಪಿ. ಸಂಗೀತಾ ಜಿ., ಡಿ.ಎಸ್.ಪಿ. ಅರುಣಕುಮಾರ ಕೋಳೂರು ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಸೋಮವಾರ ರಾತ್ರಿ ವಿಶೇಷ ತಂಡ ಗ್ರಾಮಕ್ಕೆ ಭೇಟಿ ನೀಡಿ, ವಿವಿಧ ಆಯಾಮಗಳಲ್ಲಿ ಪ್ರಕರಣದ ತನಿಖೆಗೆ ಸಂಬಂಧಿಸಿದ ಸಾಕ್ಷಗಳ ಸಂಗ್ರಹ ಕಾರ್ಯ ನಡೆಸಿದೆ ಎಂದು ಪೊಲೀಸ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಬಾಲಕನ ಮೃತ ದೇಹ ಪತ್ತೆಗೆ ಸಂಬಂಧಿಸಿದಂತೆ ಇಲಾಖೆಯು ಗಂಭೀರವಾಗಿ ಪರಿಗಣಿಸಿದ್ದು ಎಲ್ಲ ದೃಷ್ಟಿಕೋನದಿಂದಲೂ ತನಿಖೆ ಮಾಡಲಾಗುತ್ತಿದೆಸಂಗೀತಾ ಜಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.