ಯಾದಗಿರಿ: ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಗಿರಿ ಜಿಲ್ಲೆಯಾದ್ಯಂತ ಬೆಂಬಲ ವ್ಯಕ್ತವಾಗಿದ್ದು, ಸಂಪೂರ್ಣ ಬಂದ್ ಆಗಿತ್ತು.
ಯಾದಗಿರಿ, ಸುರಪುರ, ಶಹಾಪುರ, ಗುರುಮಠಕಲ್, ಹುಣಸಗಿ, ಕಕ್ಕೇರಾ, ವಡಗೇರಾ, ಕೆಂಭಾವಿ, ಯರಗೋಳ, ಸೈದಾಪುರ ಸೇರಿದಂತೆ ವಿವಿಧೆಡೆ ಜನರು ಮನೆಯಲ್ಲಿ ಕುಳಿತು ಕರ್ಫ್ಯೂ ಬೆಂಬಲಿಸಿದರು.
ಶನಿವಾರ ರಾತ್ರಿ ಅಗತ್ಯ ವಸ್ತುಗಳನ್ನು ಸಾರ್ವಜನಿಕರು ಖರೀದಿಸಿದ್ದರು. ಅಲ್ಲದೆ ಬಂದ್ ವಿಷಯವಾಗಿ ಟಿವಿ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ವಿಷಯ ಮುಟ್ಟಿದ್ದರಿಂದ ಜನರು ಹೊರಗೆ ಬರಲಿಲ್ಲ.
ಶಹಾಪುರ ತಾಲ್ಲೂಕು ಹಾಗೂ ನಗರದಲ್ಲಿ ಜನತಾ ಕರ್ಫೂ ಬೆಂಬಲಿಸಿ ಸಂಪೂರ್ಣವಾಗಿ ಸ್ತಬ್ಧವಾಗಿತ್ತು. ಮನೆಯಿಂದ ಹೆಚ್ಚಾಗಿ ಯಾರು ಹೊರ ಬರಲಿಲ್ಲ. ಅದರಲ್ಲಿ ಮಹಿಳೆಯರು ಯಾರು ಕಾಣಿಸಲಿಲ್ಲ. ಔಷಧಿ ಅಂಗಡಿ ತೆರೆದಿದ್ದವು. ಜನತಾ ಕರ್ಫೂ ಯಶಸ್ವಿಯಾಗಿದೆ.
ವಡಗೇರಾ ತಾಲ್ಲೂಕು ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ವೈರಸ್ ತಡೆಗಟ್ಟಲು ಜನತಾ ಕರ್ಫ್ಯೂ ಸಂಪೂರ್ಣ ಬೆಂಬಲ ವ್ಯಕ್ತವಾಯಿತು. ಯಾವುದೇ ಅಂಗಡಿಗಳು ಮತ್ತು ವಾಹನ ಸಂಚಾರ ಇರಲಿಲ್ಲ. ಹಳ್ಳಿಯಲ್ಲಿ ಸಹ ವ್ಯವಸಾಯ ಕೆಲಸ ಬಿಟ್ಟು ಮನೆಯಲ್ಲಿ ಇದ್ದರು.
ಕರ್ಫ್ಯೂ ಹಿನ್ನೆಲೆಯಲ್ಲಿ ಗುರುಮಠಕಲ್ ಸ್ತಬ್ಧವಾಗಿತ್ತು. ಗಾಜರಕೋಟ ಸಂತೆ ರದ್ದು ಮಾಡಲಾಗಿದೆ. ಹಳ್ಳಿಗಳಲ್ಲೂ ಜನರಿಂದ ಬಂದ್ಗೆ ಬೆಂಬಲವಾಗಿದೆ.
ಬಸ್ ಸಂಚಾರ ರದ್ದು:ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಬಸ್ ಸಂಚಾರ ಸಂಪೂರ್ಣ ಸ್ತಬ್ಧವಾಗಿತ್ತು. ಇದನ್ನು ತಿಳಿಯದ ಕೆಲ ಜನರು ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತಾ ನಿಂತಿದ್ದರು. ನಂತರ ಬಸ್ ಸಂಚಾರ ರದ್ದಾಗಿರುವ ಕುರಿತು ಖಾಸಗಿ ವಾಹನಗಳನ್ನು ಏರಿ ತಮ್ಮ ಗ್ರಾಮಗಳಿಗೆ ತೆರಳಿದರು. ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಜನರು ಬರಲಿಲ್ಲ. ಹಳ್ಳಿಗಳಲ್ಲೇ ಜನರು ಇದ್ದರು,
ರೈಲು ನಿಲ್ದಾಣ ಬಿಕೋ:ನಗರದ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿತ್ತು. ಶನಿವಾರ ಮಧ್ಯರಾತ್ರಿಯಿಂದಲೇ ರೈಲುಗಳ ಸಂಚಾರ ಕಡಿಮೆಯಾಗಿತ್ತು. ಭಾನುವಾರ ಆಗೊಮ್ಮೆ ಈಗೊಮ್ಮೆ ಮಾತ್ರ ಚಲಿಸಿದವು. ಗೂಡ್ಸ್ ರೈಲುಗಳು ಎಂದಿನಂತೆ ಸಂಚರಿಸಿದವು.
ಮೆಡಿಕಲ್, ಆಸ್ಪತ್ರೆಗಳಲ್ಲಿ ಸೇವೆ:ಕರ್ಫ್ಯೂ ಹಿನ್ನೆಲೆಯಲ್ಲಿ ಔಷಧಿ ಅಂಗಡಿ, ಜಿಲ್ಲಾಸ್ಪತ್ರೆ, ಸಮುದಾಯ, ಪ್ರಾಥಮಿಕ ಆಸ್ಪತ್ರೆಗಳು ಎಂದಿನಂತೆ ಸೇವೆ ಸಲ್ಲಿಸಿದವು.
ಒಟ್ಟಾರೆಯಾಗಿ ಜನತಾ ಕರ್ಫ್ಯೂ ಜಿಲ್ಲೆಯಾದ್ಯಂತ ಯಶಸ್ವಿಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.