ಯಾದಗಿರಿ: ನಗರದ ಗಂಜ್ ವೃತ್ತದ ಇಂದಿರಾ ಕ್ಯಾಂಟೀನ್ನಲ್ಲಿ ಬುಧವಾರದಿಂದ ಉಚಿತವಾಗಿ ಉಪಹಾರ ಮತ್ತು ಊಟ ವಿತರಿಸಲಾಗುತ್ತಿದೆ.ಜಿಲ್ಲೆಯ ಏಕೈಕ ಇಂದಿರಾ ಕ್ಯಾಂಟೀನ್ ಇದಾಗಿದೆ. ಜನಪ್ರತಿನಿಧಿಗಳ, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಬೇರೆ ಕಡೆ ಸ್ಥಾಪನೆಯಾಗಿಲ್ಲ.
ಬುಧವಾರ ಬೆಳಿಗ್ಗೆ ಸಾರ್ವಜನಿಕರು, ಆಟೊ ಚಾಲಕರು, ಕುಷ್ಠರೋಗಿ ನಿವಾಸಿಗಳು, ಕೂಲಿ ಕಾರ್ಮಿಕರು, ಆಸ್ಪತ್ರೆಗೆ ಬಂದ ಸಂಬಂಧಿಕರು ಉಚಿತ ಊಟ ಸೇವಿಸಿದ್ದಾರೆ.
ಬೆಳಿಗ್ಗಿನ ಉಪಾಹಾರಕ್ಕೆ 50 ಕೆಜಿ ಪಲಾವ್, ಮಧ್ಯಾಹ್ನ 40 ಕೆಜಿ, ರಾತ್ರಿ 35 ಕೆಜಿ ಅನ್ನ ಸಂಬಾರ್ ವಿತರಿಸಲಾಗಿದೆ.
ಈ ಕುರಿತು ಕ್ಯಾಂಟೀನ್ನ ಮುಖ್ಯ ಅಡುಗೆ ಸಹಾಯಕಿ ಗಿರಿಜಮ್ಮ ಮಾತನಾಡಿ, ‘ಗಾರೆ, ಇನ್ನಿತರ ಕೂಲಿ ಕಾರ್ಮಿಕರು ತಮ್ಮ ಗುರುತಿನ ಚೀಟಿ ತೋರಿಸಿದವರಿಗೆ ಉಚಿತವಾಗಿ ಊಟ ನೀಡಲು ಸರ್ಕಾರದಿಂದ ನಮಗೆ ಆದೇಶ ಬಂದಿದೆ. ಕೆಲವರ ಬಳಿ ಇತ್ತು. ಅವರು ತೋರಿಸಿದರು. ಗುರುತಿನ ಚೀಟಿ ಇಲ್ಲದವರಿಗೂ ಊಟ ನೀಡಿದ್ದೇವೆ’ ಎಂದು ಮಾಹಿತಿ ನೀಡಿದರು.
‘ಕೆಲ ತಿಂಗಳಿಂದ ಪ್ರತಿ ದಿನವೂ ಜೀವನಜ್ಯೋತಿ ಕುಷ್ಠರೋಗಿ ಕಾಲೊನಿ ನಿವಾಸಿಗಳಿಗೆ ಇಲ್ಲಿಂದಲೇ ಊಟ ಸಿದ್ಧಪಡಿಸಿ ಪೂರೈಸಲಾಗುತ್ತದೆ. ಜೊತೆಗೆ ಅನೇಕರು ಪಾರ್ಸೆಲ್ ಹೆಚ್ಚು ತೆಗೆದುಕೊಂಡು ಹೋಗಿದ್ದಾರೆ. ವೃದ್ಧರಿಗೆ, ಆಶಕ್ತರಿಗೆ ಕ್ಯಾಂಟೀನ್ ಒಳಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನುಳಿದವರಿಗೆಗೇಟ್ನ ಬಳಿಯೇ ಊಟ ನೀಡಲಾಗಿದೆ. ಒಳಗಡೆ ಕುಳಿತು ಊಟ ಮಾಡುವಂತೆ ಇಲ್ಲ. ಹೀಗಾಗಿ ಈ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದರು.
***
ಗಂಜ್ ಸಮೀಪ ಆಸ್ಪತ್ರೆಗಳಿದ್ದು, ಅಲ್ಲಿಗೆ ಬಂದಿರುವ ರೋಗಿಗಳ ಸಂಬಂಧಿಕರು ಇಂದಿರಾ ಕ್ಯಾಂಟೀನ್ನಲ್ಲಿ ಊಟ ತೆಗೆದುಕೊಂಡು ಹೋಗಿದ್ದಾರೆ
-ಗಿರಿಜಮ್ಮ, ಇಂದಿರಾ ಕ್ಯಾಂಟೀನ್ನ ಮುಖ್ಯ ಅಡುಗೆ ಸಹಾಯಕಿ
***
ಗ್ರಾಮೀಣ ಭಾಗದಿಂದ ನಗರ ಪ್ರದೇಶಕ್ಕೆ ರೋಗಿಯೊಬ್ಬರನ್ನು ಕರೆತಂದಿದ್ದೆ. ಇಂದಿರಾ ಕ್ಯಾಂಟೀನ್ನಲ್ಲಿ ಉಚಿತವಾಗಿ ಊಟ ನೀಡುವುದು ಗೊತ್ತಾಗಿ ಬಂದು ಊಟ ಸೇವಿಸಿದೆ
-ರವಿ ಹೊರುಂಚಾ, ಆಟೊ ಚಾಲಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.