ಸುರಪುರ: ಸಗರನಾಡಿನ ಆರಾಧ್ಯದೈವ ಗುಡ್ಡದ ಯಲ್ಲಮ್ಮದೇವಿಯ ಜಾತ್ರಾ ಮಹೊತ್ಸವ ಅಂಗವಾಗಿ ಮಂಗಳವಾರ ರಂಗಂಪೇಟೆಯಲ್ಲಿ ಪಲ್ಲಕ್ಕಿ ಮೆರವಣಿಗೆ ಅದ್ಧೂರಿಯಾಗಿ ಜರುಗಿತು.
ಜಾತ್ರೆ ಅಂಗವಾಗಿ ತಾಲ್ಲೂಕಿನ ಹೆಮನೂರ ಹತ್ತಿರದ ಕೃಷ್ಣಾ ನದಿಯಲ್ಲಿ ಗಂಗಾಸ್ನಾನ ಮುಗಿಸಿ ಕೊಂಡು ಬಂದ ಯಲ್ಲಮ್ಮ ದೇವಿಯ ಪಲ್ಲಕ್ಕಿಗೆ ಅದ್ದೂರಿ ಸ್ವಾಗತ ನೀಡುವ ಮೂಲಕ ಭಕ್ತರು ಶ್ರದ್ದಾ ಭಕ್ತಿಯಿಂದ ದೇವಿಯ ಪುರಪ್ರವೇಶ ಮಾಡಿಕೊಂಡರು. ಹಸನಾಪುರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದಿಂದ ಭಾಜಾ ಭಜಂತ್ರಿ ಡೊಳ್ಳು ಹಲಗೆ, ಕೊಂಬು ಕಹಳೆ ಮೂಲಕ ದೇವಿಯ ಅದ್ದೂರಿ ಮೆರವಣಿಗೆ ನಡೆಯಿತು.
ತಿಮ್ಮಾಪುರ-ರಂಗಂಪೇಟೆಯ ಪ್ರತಿ ನಾಗರಿಕರು ತಮ್ಮ ತಮ್ಮ ಮನೆ ಮುಂದೆ ರಂಗೋಲಿ ಬಿಡಿಸಿ ದೇವಿಯ ಪಲ್ಲಕ್ಕಿಯನ್ನು ಸ್ವಾಗತಿಸಿದರು. ರಂಗಂಪೇಟೆಯ ನಗರಸಭೆ ಉಪಕಾರ್ಯಾಲಯದ ಹತ್ತಿರದ ಎಲ್ಲಮ್ಮನ ಕಟ್ಟೆಗೆ ತಲುಪಿದ ನಂತರ ಸಾವಿರಾರು ಭಕ್ತರು ದೇವಿಗೆ ಕಾಯಿ ಕರ್ಪೂರ ಒಡೆದು ನೈವೆದ್ಯ ನೀಡಿದರು. ದೇವಿಗೆ ಕುಂಕುಮಾರ್ಚನೆ, ವಿಶೇಷ ಪೂಜೆ ನಂತರ ತೀರ್ಥ ಪ್ರಸಾದ ವಿನಿಯೋಗವಾಯಿತು.
ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ಎಲ್ಲರಿಗೂ ಮಹಾ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ದೇವಿಯ ಪಲ್ಲಕ್ಕಿಯನ್ನು ಸಗರ ಗುಡ್ಡಕ್ಕೆ ಬೀಳ್ಕೊಟ್ಟರು.
ಡಾ.ಕರಿಲಿಂಗಯ್ಯ ಜಡಿಮರಳ, ಸುಭಾಷ ಬೋಡಾ, ಹರೀಶ ತ್ರಿವೇದಿ, ಮಲ್ಕಯ್ಯ ತೇಲ್ಕರ್, ಬಾಲಕೃಷ್ಣ ಶಹಾಪುರಕರ, ಅರವಿಂದ ಬಿಲ್ಲವ್, ಮಲ್ಲು ಬಿಲ್ಲವ್, ಮಹೇಂದ್ರಕುಮಾರ ಬಿಲ್ಲವ್, ಶಿವಪ್ಪ ಹುಲ್ಪೆನವರ್, ಹೊನ್ನಪ್ಪ ತಳವಾರ, ಮುರುಳಿ ಅಂಬೂರೆ, ಹೊನ್ನಪ್ಪ ತೇಲ್ಕರ್, ರವಿ ತ್ರಿವೇದಿ, ಗೋವಿಂದಪ್ಪ ಗದ್ವಾಲ್, ವೆಂಕಣ್ಣ ಗದ್ವಾಲ, ಗೋಪಾಲ ಚಿನ್ನಾಕರ, ಯಲ್ಲಪ್ಪ ಚಿನ್ನಾಕಾರ, ನರಸಪ್ಪ ಚಿನ್ನಾಕಾರ,ಅಶೋಕ ಚಿನ್ನಾಕಾರ, ಬಸವರಾಜ ಚೆಟ್ಟಿ, ಅರುಣ ಪತ್ತಾರ, ಮಂಜು ದೋತ್ರೆ ಇತರರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.