ಯಾದಗಿರಿ: ಕುಡಿಯುವ ನೀರು ಪೂರಕೈಗಾಗಿ ಆಗ್ರಹಿಸಿ ಇಲ್ಲಿಗೆ ಸಮೀಪದ ನಾಯ್ಕಲ್ ಗ್ರಾಮ ಪಂಚಾಯಿತಿ ವಿವಿಧ ಬಡಾವಣೆಗಳ ನಿವಾಸಿಗಳು ಸೋಮವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಕಚೇರಿ ಎದುರು ಖಾಲಿ ಕೊಡಗಳನ್ನು ಇಟ್ಟು ಪ್ರತಿಭಟನೆ ನಡೆಸಿದರು.
ಗ್ರಾಮದ ಮೌಲಾಲಿ ಕಾಲೊನಿ, ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದ ಕಾಲೊನಿ, ಯುಕೆಪಿ ಕ್ಯಾಂಪ್, ಮಜೀದ್ ಕಾಲೊನಿ ಹೀಗೆ ಗ್ರಾಮದ ಹಲವು ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಇದೆ. ಹಲವು ವರ್ಷಗಳಿಂದ ವಿವಿಧ ಕಾಲೊನಿಗಳ ನಿವಾಸಿಗಳು ಕೊಡ ನೀರಿಗಾಗಿ ಹೆದ್ದಾರಿಯ ಮೇಲೆ ಜೀವ ಕೈಯಲ್ಲಿ ಹಿಡಿದುಕೊಂಡು ಕಿ.ಮೀ. ದೂರ ಕ್ರಮಿಸಿ ನೀರು ತರಬೇಕು. ನಿತ್ಯ ನೀರು ತರುವುದೇ ಕಾಯಕವಾಗಿದೆ ಎಂದು ಆಗ್ರಹಿಸಿದರು.
ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದ ನಿವಾಸಿಗಳು ಕೊಡ ಕುಡಿವ ನೀರಿಗಾಗಿ ಪರದಾಡುವಂತಾಗಿದೆ ಎಂದು ನಿವಾಸಿ ಜಲಾಲಸಾಬ್ ತಂಬಾಕ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೆಳಿಗ್ಗೆ 9 ಗಂಟೆಯಿಂದ ಆರಂಭವಾದ ಪ್ರತಿಭಟನಾ ಸ್ಥಳಕ್ಕೆ ಅಧಿಕಾರಿಗಳು ಬರುವವರೆಗೆ ಹಿಂಪಡಿಯುವುದಿಲ್ಲ ಎಂದು ಮಹಿಳೆಯರು ಪಟ್ಟು ಹಿಡಿದರು. ಇದರಿಂದ ಸ್ಥಳಕ್ಕೆ ಶಹಾಪುರ ತಾ.ಪಂ. ಇಒ ಜಗನ್ನಾಥಮೂರ್ತಿ ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿದರು.
2-3 ದಿನದೊಳಗೆ ತಾತ್ಕಾಲಿಕ ಕುಡಿವ ನೀರಿನ ವ್ಯವಸ್ಥೆ ಮಾಡುವುದಾಗಿ ತಾಪಂ ಇಒ ತಿಳಿಸಿದರು. ಆಗ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು.
ರಸೂಲ್ಬೀ, ರಜೀಯಾಬೇಗಂ, ಶಾಹೀದ್ಬೇಗಂ, ಸಾಹೀಬಿ ಕುರುಕುಂದಿ, ರಜೀಯಾಬೇಗಂ, ಪ್ಯಾರಿಬೇಗಂ, ಗೂಡೂಮಾಬೇಗಂ, ಫಾತನಬೀ, ಚಾಂದಬೀ, ಸಾಬೀರ್ ಬೇಗಂ, ಅಬ್ದುಲ್ ರಜಾಕ್ ಚಟ್ನಳ್ಳಿ, ಖಾಜಾ ಮೈನೋದ್ಧೀನ್ ಜೇಮಶೇರಿ, ಜಾವೀದ್ ಕುರುಕುಂದಿ, ಭೀಮರಾಯ, ಮೈಹಿಮೂದಸಾಬ್ ಹೊನಗೇರಾ, ಸಲಿಂ ಗೋಡಿಕಾರ, ಮೀರಾಸಾ, ಅಬ್ದುಲ್ನಬೀ ಹೊಸಳ್ಳಿ, ಅಬ್ದುಲ್ ನಬೀ ಕುಂದೂರ, ಅಬ್ಬಾಸಲೀ ಹೊಸಳ್ಳಿ, ಬಾಷಾ ಬಲ್ಕಲ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.