ಯಾದಗಿರಿ: ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಅವರು ಜಿಲ್ಲೆಯಲ್ಲಿ ಲಾಕ್ಡೌನ್ ವಿಸ್ತರಣೆಗೆ ಆದೇಶಿಸಿದ ಒಂದು ಗಂಟೆಯೊಳಗೆಹಿಂಪಡೆದು ಮತ್ತೆ ಲಾಕ್ಡೌನ್ ವಿಸ್ತರಣೆ ಇಲ್ಲ ಘೋಷಿಸಿದರು.
ಜುಲೈ 15ರ ರಾತ್ರಿ 8 ಗಂಟೆಯಿಂದ ಜುಲೈ 22ರ ರಾತ್ರಿ 8 ಗಂಟೆಯವರೆಗೆ ಮಾತ್ರ ಲಾಕ್ಡೌನ್ ಜಾರಿಯಲ್ಲಿರುತ್ತದೆ. ಆದರೆ, ಮುಂದೆ ಲಾಕ್ಡೌನ್ ವಿಸ್ತರಣೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಅವರು ತಿಳಿಸಿದ್ದಾರೆ.
ಜುಲೈ 21ರಂದು ಹೊರಡಿಸಿದ ಲಾಕ್ಡೌನ್ ವಿಸ್ತರಣೆ ಆದೇಶವನ್ನು ತಕ್ಷಣದಿಂದಲೇ ಹಿಂಪಡೆಯಲಾಗಿದೆ. ಜೂನ್ 30 ಹಾಗೂ ಜುಲೈ 14ರಂದು ಹೊರಡಿಸಲಾಗಿರುವ ಆದೇಶಗಳಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜಿಲ್ಲೆಯ ಸಾರ್ವಜನಿಕರು ಯಾವುದೇ ಆತಂಕ, ಭಯ ಪಡುವುದು ಬೇಡ. ಆದರೆ, ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮುಖಗವಸನ್ನು ಕಡ್ಡಾಯವಾಗಿ ಧರಿಸುವುದು, ಸ್ಮಾನಿಟೈಸರ್ ಉಪಯೋಗಿಸುವುದು, 6 ಅಡಿ ಅಂತರ ಕಾಯ್ದುಕೊಳ್ಳುವುದು, ಆಗಾಗ ಸಾಬೂನಿನಿಂದ ಕೈಗಳನ್ನು ಸ್ವಚ್ಛಗೊಳಿಸುವುದನ್ನು ತಪ್ಪದೇ ಪಾಲಿಸಬೇಕು. ಕೋವಿಡ್-19 ಮುಕ್ತ ಜಿಲ್ಲೆಯನ್ನಾಗಿಸುವ ಪ್ರಯತ್ನದಲ್ಲಿ ಪ್ರತಿಯೊಬ್ಬರೂ ಸಹಕರಿಸಬೇಕಾಗಿ ಕೋರಿದ್ದಾರೆ.
ಗೊಂದಲ ಮೂಡಿಸಿದ ಆದೇಶ ಪ್ರತಿ
ಮಂಗಳವಾರ ಸಂಜೆ 5 ಗಂಟೆಗೆ ಮೊಹರು, ಜಿಲ್ಲಾಧಿಕಾರಿ ಸಹಿ, ದಿನಾಂಕಒಳಗೊಂಡ ಆದೇಶ ಪ್ರತಿ ಜಿಲ್ಲೆಯ ವಾಟ್ಸ್ ಆ್ಯಪ್ ಗ್ರೂಪ್ಗಳಲ್ಲಿ ಹರಿದಾಡುತ್ತಿತ್ತು. ಹಲವಾರು ಜನರು ಅದನ್ನು ಸ್ಟೇಟಸ್ಗೆ ಇಟ್ಟುಕೊಂಡಿದ್ದರು. ಜುಲೈ 22ರ ರಾತ್ರಿ 8ಗಂಟೆಯಿಂದ29 ರ ಬೆಳಿಗ್ಗೆ 5 ಗಂಟೆ ವರೆಗೆ ಲಾಕ್ಡೌನ್ ವಿಸ್ತರಣೆ ಮಾಡಿ ಆದೇಶಿಸಲಾಗಿದೆ ಎನ್ನುವಆದೇಶ ಪ್ರತಿ ಹರಿದಾಡಿತ್ತು. 5 ಗಂಟೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಾಮಾಜಿಕ ಜಾಲತಾಣಗಳಲ್ಲಿ ಲೈನ್ ಬಂದು 'ರಾಜ್ಯದಲ್ಲಿ ಯಾವುದೇ ಜಿಲ್ಲೆಯಲ್ಲಿ ಲಾಕ್ ಡೌನ್ ಇರುವುದಿಲ್ಲ ಎಂದು ಘೋಷಿಸಿದರು. ಇದರಿಂದ ಎಚ್ಚೆತ್ತ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಅವರು, ಲಾಕ್ ಡೌನ್ ಆದೇಶ ಹಿಂಪಡೆಯಲಾಗಿದೆ. ಆದರೆ, ಜುಲೈ 22 ರಾತ್ರಿ ವರೆಗೆ ಲಾಕ್ ಡೌನ್ ಇರುತ್ತದೆ. ಅದರಂತೆ ರಾತ್ರಿ 8 ರಿಂದ ಬೆಳಿಗ್ಗೆ 5 ಗಂಟೆ ವರೆಗೆ ಕರ್ಫ್ಯೂ ಇರುತ್ತದೆ ಎಂದು ತಿಳಿಸಿದರು.
ಈ ಹಿಂದೆಯೂ ಜುಲೈ 14 ರಂದು ಜಿಲ್ಲಾಧಿಕಾರಿ ಸಹಿ, ಮೊಹರು ಇಲ್ಲದ ಆದೇಶ ಪ್ರತಿ ಹರಿದಾಡಿತ್ತು. ಅದರಲ್ಲಿ ಬೆಳಿಗ್ಗೆ5 ರಿಂದ ಸಂಜೆ 5 ರವರೆಗೆ ಲಾಕ್ ಡೌನ್ ಇರುತ್ತದೆ ಎಂದು ತಿಳಿಸಲಾಗಿತ್ತು. ನಂತರ ಮತ್ತೊಂದು ಆದೇಶದಲ್ಲಿ ಮಧ್ಯಾಹ್ನ 1 ಗಂಟೆ ವರೆಗೆ ಮಾತ್ರ ಎಲ್ಲ ರೀತಿಯ ವ್ಯಾಪಾರ ವಹಿವಾಟಿಗೆ ಅನುಮತಿ ನೀಡಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.