
ಹುಣಸಗಿ: ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಅಧಿಕ ಮಳೆ ಹಾಗೂ ದೀಪಾವಳಿಯ ಬಳಿಕ ಹೆಚ್ಚಿನ ಪ್ರಮಾಣದಲ್ಲಿ ಮಂಜು ಕವಿದ ವಾತಾವರಣದಿಂದಾಗಿ ತಾಲ್ಲೂಕಿನಲ್ಲಿ ಬೆಳೆದಿರುವ ತೊಗರಿ ಬೆಳೆಗೆ ಮಾರಕವಾಗಿದೆ.
ಮುಂಗಾರು ಆರಂಭದ ಸಂದರ್ಭದಲ್ಲಿ ಕೃಷಿ ಇಲಾಖೆಯಿಂದ ರೈತರು ತೊಗರಿ ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡಿದ್ದರು. ಆದರೆ ಅಕ್ಟೋಬರ್ನಲ್ಲಿ ಮಳೆಯಿಂದಾಗಿ ತೊಗರಿ ಗಿಡಗಳು ಎತ್ತರವಾಗಿ ಬೆಳೆದಿವೆ. ಆದರೆ ಕಾಪು ಕೊಂಡಿ ಉದುರಿಹೋಗಿವೆ ಎಂದು ರೈತರು ಹೇಳುತ್ತಾರೆ.
‘ಹುಣಸಗಿ ವಲಯದ ಗ್ರಾಮೀಣ ಭಾಗದಲ್ಲಿ 9,300 ಎಕರೆ ಹಾಗೂ ತಾಲ್ಲೂಕಿನ ಕೊಡೇಕಲ್ಲ ಹೋಬಳಿ ವ್ಯಾಪ್ತಿಯಲ್ಲಿ ಅಂದಾಜು 16,000 ಎಕರೆ ಪ್ರದೇಶದಲ್ಲಿ ರೈತರು ವಿವಿಧ ತಳಿಯ ತೊಗರಿ ಬಿತ್ತನೆ ಮಾಡಿಕೊಂಡಿದ್ದರು. ಆದರೆ ಬಹುತೇಕ ಹೂ ಉದುರಿ ಬಿದ್ದಿರುವುದು ಸ್ಥಳ ಪರಿಶೀಲನೆ ಮಾಡಿದಾಗ ಗಮನಕ್ಕೆ ಬಂದಿದೆ’ ಎಂದು ಕೃಷಿ ಅಧಿಕಾರಿ ದೀಪಾ ದೊರೆ ಮಾಹಿತಿ ನೀಡಿದರು.
‘8 ಎಕರೆ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಿದೇವು. ಇಂದಿಗೂ ತೊಗರಿ ಗಿಡ ಹಚ್ಚ ಹಸಿರು ಇದ್ದರೂ ಕೂಡ ಫಲ ಇಲ್ಲ. ಇದರಿಂದಾಗಿ ತೊಗರಿ ಮತ್ತೆ ಸಾಲದ ಸುಳಿಗೆ ಸಿಲುಕವಂತೆ ಮಾಡಿದೆ’ ಎಂದು ಗುಂಡಲಗೇರಾ ಗ್ರಾಮದ ಶಾಂತಗೌಡ ಕವಿತಾಳ, ಮಾರಲಬಾವಿ ಗ್ರಾಮದ ಸಾಯಬಣ್ಣ ಹಾಗೂ ಪಿರೋಜಿ ಸುಬೇದಾರ ನೊಂದು ನುಡಿದರು.
‘ಆರಂಭದಲ್ಲಿ ಎತ್ತರದಲ್ಲಿ ಗಿಡ ಬೆಳೆದಿದ್ದರಿಂದಾಗಿ ಟ್ರಾಕ್ಟರ್ ಮೂಲಕ ಕೀಟನಾಶಕ ಸಿಂಪರಣೆ ಮಾಡಲಾಗಿತ್ತು. ಆದರೆ ಕಳೆದ 15 ದಿನಗಳ ಹಿಂದೆ ಮಂಜಿನಿಂದ ಎಲ್ಲ ಹೂವು ಉದುರಿದ್ದು ಗಿಡದ ಕೊನೆ ಭಾಗದಲ್ಲಿ ಮಾತ್ರ ಅಲ್ಪ ತೊಗರಿ ಹಿಡಿದುಕೊಂಡಿದ್ದು, ಎಕರೆಗೆ ಕೇವಲ 2 ಕ್ವಿಂಟಲ್ ಮಾತ್ರ ಬರುವ ನಿರಿಕ್ಷೆ ಇದೆ’ ಎನ್ನುತ್ತಾರೆ ರೈತರು.
‘ಕಳೆದ ವರ್ಷ ಎಕರೆಗೆ 8 ಕ್ವಿಂಟಲ್ ತೊಗರಿ ಬೆಳೆದಿದ್ದೇವು. ಆದರೆ ಈ ಬಾರಿ ಮಾಡಿದ ಖರ್ಚು ಕೂಡಾ ಬರುವ ಅನುಮಾನವಿದೆ’ ಎಂದು ರಾಜನಕೋಳುರು ಗ್ರಾಮದ ಯಂಕನಗೌಡ ವಠಾರ, ನೀಲಕಂಠ ವಡಗೇರಿ ಹೇಳಿದರು.
ಇದೇ ಸ್ಥಿತಿ ತಾಲ್ಲೂಕಿನ ಮಂಜಲಾಪುರ, ಶ್ರೀನಿವಾಸಪುರ, ಕನಗಂಡನಹಳ್ಳಿ, ಕೊಡೇಕಲ್ಲ, ಬಪ್ಪರಗಿ, ಹೊರಟ್ಟಿ, ಮದಲಿಂಗನಾಳ, ಮಾರಲಬಾವಿ ಸೇರಿದಂತೆ ಇತರ ಗ್ರಾಮದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.