
ವಡಗೇರಾ: ‘ಟಿವಿ ಮೊಬೈಲ್ಗಳ ಹಾವಳಿಯಿಂದ ಗ್ರಾಮೀಣ ಪ್ರದೇಶದ ಅಪ್ಪಟ ಕಲೆಗಳಾದ ಬಯಲಾಟ, ಪೌರಾಣಿಕ ನಾಟಕ ಹಾಗೂ ಸಾಮಾಜಿಕ ಕಥೆಗಳು ನಶಿಸಿ ಹೋಗುತ್ತಿವೆ’ ಎಂದು ಕಾಡಂಗೇರಾ (ಬಿ) ಬಸಯ್ಯಸ್ವಾಮಿ ಹಿರೇಮಠ ಕಳವಳ ವ್ಯಕ್ತಪಡಿಸಿದರು.
ತಾಲ್ಲೂಕಿನ ಕಾಡಂಗೇರಾ(ಬಿ) ಗ್ರಾಮದಲ್ಲಿ ಶ್ರೀ ಗುರು ಪುಟ್ಟರಾಜ ಸಂಗೀತ ಸಾಹಿತ್ಯ ಸಾಂಸ್ಕೃತಿಕ ಕಲಾ ಸೇವಾ ಸಂಸ್ಥೆ ಟೋಕಾಪೂರ ವತಿಯಿಂದ ಹಮ್ಮಿಕೊಂಡಿದ್ದ ಪೌರಾಣಿಕ ಗುರು-ಶಿಷ್ಯ ಎಂಬ ನಾಟಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಹಿಂದಿನ ಕಾಲದಲ್ಲಿ ಪೌರಾಣಿಕ ಕಥೆ ಬಯಲಾಟ, ಸಾಮಾಜಿಕ ನಾಟಕಗಳು ಮನುಷ್ಯನ ನಿಜ ಜೀವನದ ಭಾಗವಾಗಿದ್ದವು. ಇಂದಿನ ಯುವಕರಿಗೆ ಗ್ರಾಮೀಣ ಕಲೆಯ ಬಗ್ಗೆ ಮನವರಿಕೆ ಮಾಡಿಕೊಡುವದರ ಜತೆಗೆ ಗ್ರಾಮೀಣ ಸೊಗಡಿನ ಕಲೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದರು.
ಪಂಡಿತ್ ನಾಗಮೂರ್ತಿ ಮಾತನಾಡಿ, ‘ಸರ್ಕಾರ ಗ್ರಾಮೀಣ ಭಾಗದ ಬಯಲಾಟ, ನಾಟಕ ಹಾಗೂ ಜಾನಪದ ಕಲಾವಿದರಿಗೆ ಪ್ರೋತ್ಸಾಹಿಸಬೇಕು’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಮಾಳಪ್ಪ, ಗ್ರಾ.ಪಂ. ಉಪಾಧ್ಯಕ್ಷ ವಿಶ್ವನಾಥರೆಡ್ಡಿ, ಹಣಮಂತ ಅಜ್ಜಪ್ಪನೂರ, ಲಕ್ಷ್ಮಣ , ದೊಡ್ಡಪ್ಪ ಕಾಕಲಕಾರ, ಗ್ರಾ.ಪಂ. ಸದಸ್ಯರಾದ ರಾಜಶೇಖರ ಚಾಮನಾಳ, ಸಿದ್ದಪ್ಪ ಸುಕುಲಿ, ನಾಗಪ್ಪ, ರೆಡ್ಡಪ್ಪ ಕಲಾಲ್, ದೊಡ್ಡಪ್ಪ ನಾಯ್ಕೋಡಿ, ಕಲಾವಿದರು ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ತಮ್ಮಣ್ಣ ನಿರೂಪಿಸಿದರು, ರಾಘವೇಂದ್ರ ವಂದಿಸಿದರು.