ADVERTISEMENT

ಊರುಸ್‌ಗೆ ಹೊರಟಿದ್ದವರು ಮಸಣಕ್ಕೆ: ಲಾರಿ- ಕ್ರೂಸರ್ ಡಿಕ್ಕಿ, ಸ್ಥಳದಲ್ಲೇ ಐವರು ಸಾವು

​ಪ್ರಜಾವಾಣಿ ವಾರ್ತೆ
Published 6 ಜೂನ್ 2023, 4:11 IST
Last Updated 6 ಜೂನ್ 2023, 4:11 IST
ಅಪಘಾತದಲ್ಲಿ ನುಜ್ಜುಗುಜ್ಜಾಗಿರುವ ವಾಹನಗಳು
ಅಪಘಾತದಲ್ಲಿ ನುಜ್ಜುಗುಜ್ಜಾಗಿರುವ ವಾಹನಗಳು   

ಯಾದಗಿರಿ: ನಿಂತಿದ್ದ ಲಾರಿಗೆ ಕ್ರೂಸರ್‌ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಐವರು ಮೃತಪಟ್ಟ ದುರ್ಘಟನೆ ತಾಲ್ಲೂಕಿನ ಬಳಿಚಕ್ರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಮಂಗಳವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಸಂಭವಿಸಿದೆ.

ದುರ್ಘಟನೆಯಲ್ಲಿ 3 ಗಂಡು, 2 ಹೆಣ್ಣು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡಿರುವ 13 ಜನರನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.

ಮೃತರು ಹಾಗೂ ಗಾಯಾಳುಗಳು ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯಿಂದ ಕಲಬುರಗಿ ಖ್ವಾಜಾ ಬಂದೇ ನವಾಜ್ ದುರ್ಗಾದ ಉರುಸ್‌ಗೆ ಹೊರಟ್ಟಿದ್ದರು. ರಸ್ತೆ ಪಕ್ಕದಲ್ಲಿ ನಿಲ್ಲಿಸಿದ ಲಾರಿಗೆ ಹಿಂಬದಿಯಿಂದ ಕ್ರೂಸರ್ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಕ್ರೂಸರ್‌ನಲ್ಲಿ 18 ಜನರಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಸ್ಥಳಕ್ಕೆ ಸೈದಾಪುರ ಪೊಲೀಸ್ ಠಾಣೆಯ ಪಿಐ ಕಾಳಪ್ಪ ಬಡಿಗೇರ ಹಾಗೂ ಡಿವೈಎಸ್ಪಿ ಬಸವೇಶ್ವರ ಹೀರಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಪ್ರಕರಣ ಸೈದಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಮೃತರ ವಿವರ: ಮುನೀರ್‌, ನಯಾಮತ್‌ ಉಲ್ಲಾ (40), ಮುದಾಸಿರ್‌ (12), ರಮೀಜಾ (50), ಸುಮಿ ಮೌಶುಮ್‌ (12) ಮೃತಪಟ್ಟವರು.

ಗಾಯಗೊಂಡವರು: ಅಯಿಷಾ, ಅನಾಸ್ ಭಾಷಾ, ಸುಹಾನ ಭಾಷಾ, ರಮೀಜಾ ಶೇಕ್‌, ಮಸಿ ಉಲ್ಲಾ, ಸೀಮಾ, ರಿಯಾಜ್‌, ಮುಜ್ಜಿ ಮುನೀರ್‌, ನಸೀಮ್ ಉಲ್ಲಾ, ಮಶೌಮ್‌ ಭಾಷಾ, ಮುಜಾಕೀರ್, ಹನೀಫ್‌, ಸೋಹೆಲ್‌ ಖಲೀಲ್‌ ಗಾಯಗೊಂಡಿದ್ದಾರೆ.

ನಂದಾಲ್ಯ ಜಿಲ್ಲೆಯ ಅತ್ಮಕೂರು ತಾಲ್ಲೂಕಿನ ವೆನುಗೋಡು, ತಾಂಡ್ರಾಪಾಡು, ಬಂಡೆ ಅತ್ಮಕೂರು ಗ್ರಾಮದವರು ಮೃತರು, ಗಾಯಾಳುಗಳಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.