ADVERTISEMENT

ಮಠಗಳಿಗೆ ಭೇಟಿ ನೀಡಿದ ಕೇಂದ್ರ ಸಚಿವ ಭಗವಂತ ಖೂಬಾ

ಜನಾಶೀರ್ವಾದ ಯಾತ್ರೆ ಹೆಸರಿನಲ್ಲಿ ಸ್ವಾಮೀಜಿಗಳ ಆರ್ಶೀವಾದ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 1:11 IST
Last Updated 19 ಆಗಸ್ಟ್ 2021, 1:11 IST
ಯಾದಗಿರಿ ತಾಲ್ಲೂಕಿನ ಸುಕ್ಷೇತ್ರ ಅಬ್ಬೆತುಮಕೂರಿನ ಸಿದ್ದ ಸಂಸ್ಥಾನ ಮಠ ವಿಶ್ವಾರಾಧ್ಯರ ದೇವಸ್ಥಾನದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಅವರು ಸ್ವಾಮೀಜಿಯಿಂದ ಆಶೀರ್ವಾದ ಪಡೆದರು
ಯಾದಗಿರಿ ತಾಲ್ಲೂಕಿನ ಸುಕ್ಷೇತ್ರ ಅಬ್ಬೆತುಮಕೂರಿನ ಸಿದ್ದ ಸಂಸ್ಥಾನ ಮಠ ವಿಶ್ವಾರಾಧ್ಯರ ದೇವಸ್ಥಾನದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಅವರು ಸ್ವಾಮೀಜಿಯಿಂದ ಆಶೀರ್ವಾದ ಪಡೆದರು   

ಯಾದಗಿರಿ: ಕೇಂದ್ರ ಸಚಿವ ಭಗವಂತ ಖೂಬಾ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಜನಾಶೀರ್ವಾದ ಯಾತ್ರೆಗೆ ಮುನ್ನ ಎರಡು ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳಿಂದ ಆರ್ಶೀವಾದ ಪಡೆದರು.

ಕಲಬುರ್ಗಿಯಿಂದ ಯಾದಗಿರಿ ಆಗಮಿಸುವ ಮಾರ್ಗ ಮಧ್ಯೆ ಚಿತ್ತಾಪುರ ತಾಲ್ಲೂಕಿನ ನಾಲವಾರದ ಕೋರಿ ಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಪೀಠಾಧಿಪತಿ ಸಿದ್ದ ತೋಟೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು.

ನಂತರ ಯಾದಗಿರಿ ತಾಲ್ಲೂಕಿನ ಸುಕ್ಷೇತ್ರ ಅಬ್ಬೆ ತುಮಕೂರಿನ ಸಿದ್ದ ಸಂಸ್ಥಾನ ಮಠ ವಿಶ್ವಾರಾಧ್ಯರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಪೀಠಾಧಿಪತಿ ಗಂಗಾಧರ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು. ನಂತರ ಆಧುನಿಕ ವಚನಗಳ ಗ್ರಂಥ ವಚನ್ನೋಲ್ಲಾಸ ಪುಸ್ತಕ ಬಿಡುಗಡೆ ಮಾಡಿದರು. ಜನಾಶೀರ್ವಾದದ ಜೊತೆಗೆ ಮಠದ ಪೀಠಾಧಿಪತಿಗಳ ಆರ್ಶೀವಾದ ಪಡೆದರು.

ADVERTISEMENT

ಈ ವೇಳೆ ಶಾಸಕರಾದ ವೆಂಕಟರೆಡ್ಡಿ ಮುದ್ನಾಳ, ಬಿ.ಜಿ. ಪಾಟೀಲ, ಶಶೀಲ್ ನಮೋಶಿ, ರಾಜಕುಮಾರ ಪಾಟೀಲ್ ತೆಲ್ಕೂರ, ಮಾಜಿ ಶಾಸಕರಾದ ಡಾ. ವೀರಬಸವಂತರೆಡ್ಡಿ ಮುದ್ನಾಳ, ದೊಡಪ್ಪಗೌಡ ಪಾಟೀಲ ನರಬೋಳ, ಗುರು ಪಾಟೀಲ ಶಿರವಾಳ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಶರಣಭೂಪಾಲರೆಡ್ಡಿ ನಾಯ್ಕಲ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್, ತೊಗರಿ ಮಂಡಳಿ ಅಧ್ಯಕ್ಷ ಲಿಂಗಾರೆಡ್ಡಿಗೌಡ ಬಾಸರೆಡ್ಡಿ ನಾಲವಾರ, ಅರವಿಂದ ಚವಾಣ್‌, ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಯಾದಗಿರಿ ನಗರಸಭೆ ಅಧ್ಯಕ್ಷ ವಿಲಾಸ್ ಪಾಟೀಲ, ಗುರು ಕಾಮ, ವೆಂಕಟರೆಡ್ಡಿ ಅಬ್ಬೆತುಮಕೂರ ಇದ್ದರು.

ಭರ್ಜರಿ ಸ್ವಾಗತ, ನಿಯಮ ಉಲ್ಲಂಘನೆ:

ಯಾದಗಿರಿ ತಾಲ್ಲೂಕಿನ ಯರಗೋಳ ಗ್ರಾಮದಲ್ಲಿ ಬಿಜೆಪಿ ಪಕ್ಷದವರು ಕೇಂದ್ರ ಸಚಿವ ಭಗವಂತ ಖೂಬಾ ಸ್ವಾಗತಿಸಲು ಭರ್ಜರಿ ತಯಾರಿ ಮಾಡಿಕೊಂಡಿದ್ದರು. ಇದೇ ವೇಳೆ ಕೋವಿಡ್‌ ನಿಯಮ ಉಲ್ಲಂಘಿಸಿ ಮಾಸ್ಕ್‌ ಧರಿಸದೇ ಅಂತರ ಕಾಪಾಡಿಕೊಳ್ಳದೇ ನಿಂತಿದ್ದರು.

ರಾಜ್ಯ ಅಂಬಿಗರ ಚೌಡಯ್ಯ ನಿಗಮ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಅವರು ನೂರಾರು ಕಾರ್ಯಕರ್ತರೊಂದಿಗೆ ಸೇರಿ ಅದ್ಧೂರಿಯಾಗಿ ಸ್ವಾಗತಿಸಿರುವುದು ಸಾರ್ವಜನಿಕರ ಟೀಕೆಗೆ ಕಾರಣವಾಗಿದೆ.

ಖೂಬಾ ಅವರ ಮೇಲೆ ಕಾರ್ಯಕರ್ತರು ಹೂವಿನ ಸುರಿಮಳೆಗೈದರು. ಅಲ್ಲದೇ ಅಪಾರ ಪ್ರಮಾಣದಲ್ಲಿ ಪಟಾಕಿಗಳನ್ನು ಸಿಡಿಸಿದರು. ಶಾಸಕರಾದ ವೆಂಕಟರೆಡ್ಡಿ ಮುದ್ನಾಳ, ರಾಜೂಗೌಡ ಕೆಲ ಕಾಲ ಗೊಂದಲಕ್ಕೆ ಒಳಗಾಗಿದ್ದರು.

***

ಕೇಂದ್ರ ಸಚಿವರನ್ನು ಕೋವಿಡ್‌ ನಿಯಮ ಉಲ್ಲಂಘಿಸಿ ಸ್ವಾಗತಿಸಿರುವುದಲ್ಲದೇ, ಬಿಹಾರ, ಉತ್ತರಪ್ರದೇಶಗಳಲ್ಲಿ ಮಾಡಿದಂತೆ ಬಂದೂಕು ಮೂಲಕ ಸಿಡಿಮದ್ದು ಸಿಡಿಸಿರುವುದು ಜಿಲ್ಲೆಗೆ ಅವಮಾನ ಮಾಡಿದಂತೆ ಆಗಿದೆ
ಅವಿನಾಶ ಜಗನ್ನಾಥ, ಯುವ ಕಾಂಗ್ರೆಸ್‌ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.