ವಡಗೇರಾ: ಮಳೆಗಾಲ ಆಗಿರುವದರಿಂದ ಪಂಚಾಯಿತಿಯಿಂದ ಕಡ್ಡಾಯವಾಗಿ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಕ್ರಮಕೈಗೊಳ್ಳಬೇಕು’ ಎಂದು ಜಿ.ಪಂ ಸಿಇಒ ಲವೀಶ್ ಒರಡಿಯಾ ಹೇಳಿದರು.
ತಾಲ್ಲೂಕಿನ ನಾಯ್ಕಲ್, ಕಂದಳ್ಳಿ ಹಾಗೂ ಹೈಯ್ಯಾಳ(ಬಿ) ಗ್ರಾಮಗಳಿಗೆ ಬೇಟಿ ನೀಡಿ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಘಟಕ ಹಾಗೂ ಕಂದಳ್ಳಿ ಬ್ಯಾರೇಜ್ ಹತ್ತಿರವಿರುವ ನೀರು ಶುದ್ಧೀಕರಿಸುವ ಘಟಕ ಪರಿಶೀಲಿಸಿ, ಅವರು ಮಾತನಾಡಿದರು.
‘ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ 17 ಪಂಚಾಯಿತಿಗಳು ಕಡ್ಡಾಯವಾಗಿ ಪ್ರತಿಯೊಂದು ಗ್ರಾಮಕ್ಕೂ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಬೇಕು. ಅಶುದ್ಧ ನೀರು ಸರಬರಾಜು ಮಾಡಿದರೆ ಅಥವಾ ದೂರು ಬಂದರೆ ಅಂತಹ ಪಂಚಾಯಿತಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವದು’ ಎಂದು ಎಚ್ಚರಿಸಿದರು.
‘ಗ್ರಾಮಕ್ಕೆ ನೀರು ಸರಬರಾಜು ಮಾಡುವ ಟ್ಯಾಂಕ್ ಅನ್ನು ಆಗಾಗ ಸ್ವಚ್ಛಗೊಳಿಸಬೇಕು. ಜತೆಗೆ ಅದರಲ್ಲಿ ಬ್ಲೀಚಿಂಗ್ ಪೌಡರ್ ಅನ್ನು ಸಿಂಪಡಿಸಿ, ನೀರು ಸರಬರಾಜು ಮಾಡಬೇಕು. ಕುಡಿಯುವ ನೀರು ಸರಬರಾಜು ಮಾಡುವ ಪೈಪ್ಗಳು ಹಾಳಾಗಿದ್ದರೆ ಅಥವಾ ಒಡೆದುಹೊಗಿದ್ದರೆ ಕೂಡಲೇ ದುರಸ್ತಿ ಮಾಡಿ ನೀರು ಸರಬರಾಜು ಮಾಡಬೇಕು’ ಎಂದು ತಿಳಿಸಿದರು.
‘ಕಂದಳ್ಳಿ ಗ್ರಾಮದ ಹತ್ತಿರವಿರುವ ನೀರು ಶುದ್ಧೀಕರಿಸುವ ಘಟಕಕ್ಕೆ ಬೇಟಿ ನೀಡಿ, ಅದನ್ನು ಪರಿಶೀಲಿಸಿದ ನಂತರ ಸಾರ್ಜನಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಕಂದಳ್ಳಿ ಹತ್ತಿರವಿರುವ ನೀರು ಶುದ್ಧೀಕರಿಸುವ ಘಟಕ ನವೀಕರಿಸುವುದು ಬಹಳ ಅವಶ್ಯವಿದೆ. ಕೂಡಲೆ ಕ್ರಿಯಾ ಯೋಜನೆ ಸಿದ್ಧಪಡಿಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಕ್ಸಕ್ಯೂಟಿವ್ ಇಂಜಿನಿಯರ್ (ಇಇ) ಅವರಿಗೆ ಸೂಚಿಸಿದರು.
ತಾ.ಪಂ ಮಲ್ಲಿಕಾರ್ಜುನ ಸಂಗ್ವಾರ, ತಾಲ್ಲೂಕು ಆರೋಗ್ಯ ಅಧಿಕಾರಿ ರಮೆಸ ಗುತ್ತೇದಾರ, ಪಿಡಿಒ ಶರಣಗೌಡ ಬಿ. ಉಳ್ಳೆಸೂಗುರು, ಸಿದ್ದವೀರಪ್ಪ, ಚೆನ್ನಪ್ಪ, ದೇವಿಂದ್ರಪ್ಪ, ಟಿಐಇಸಿ ದುರ್ಗೇಶ ವಿವಿಧ ಇಲಾಖೆಯ ಅಧಿಕಾರಿಗಳು ಹಾಗು ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.