ADVERTISEMENT

ಯಾದಗಿರಿ | ನಾಳೆಯಿಂದ ನೀರಾವರಿಗಾಗಿ ಕಾಲುವೆ ಜಾಲಕ್ಕೆ ನೀರು

​ಪ್ರಜಾವಾಣಿ ವಾರ್ತೆ
Published 19 ಜುಲೈ 2020, 17:06 IST
Last Updated 19 ಜುಲೈ 2020, 17:06 IST

ಯಾದಗಿರಿ: 2020-21ನೇ ಸಾಲಿನ ಮುಂಗಾರು ಹಂಗಾಮಿನ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ನಿರ್ವಹಣೆ ಮತ್ತು ಪೋಷಣೆ ನಾರಾಯಣಪುರ ಅಡಿಯಲ್ಲಿ ಬರುವ ಅಧಿಸೂಚಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿಗಾಗಿ ಕಾಲುವೆ ಜಾಲಕ್ಕೆ ಜುಲೈ 21ರಿಂದ ನೀರು ಹರಿಸುವುದಾಗಿ ಕೃಷ್ಣಾ ಭಾಗ್ಯ ಜಲ ನಿಗಮದ ಪ್ರಕಟಣೆ ತಿಳಿಸಿದೆ.

ಜುಲೈ 13 ರಂದು ಜರುಗಿದ 2020-21ನೇ ಸಾಲಿನ ಮುಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆಯ ಕುರಿತು ಕಚೇರಿ ಟಿಪ್ಪಣಿಯ ಅನುಮೋದಿತ ಅಂಶಗಳಂತೆ ಅಧಿಸೂಚಿತ ಅಚ್ಚುಕಟ್ಟು ಪ್ರದೇಶಕ್ಕೆ ಕೃಷ್ಣಾ ಮೇಲ್ದಂಡೆ ಯೋಜನೆಯ ಮುಂಗಾರು ಹಂಗಾಮಿಗೆ ನೀರಾವರಿಗಾಗಿ ಕಾಲುವೆ ಜಾಲದಲ್ಲಿ ಜುಲೈ 21ರಿಂದ ಮಳೆ ಆಧರಿಸಿ ನೀರು ಹರಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾಲುವೆ ಜಾಲದ ಗೇಟ್‍ಗಳನ್ನು ಹಾನಿ ಮಾಡುವುದು, ಅನಧಿಕೃತವಾಗಿ ಎಸ್ಕೇಪ್‍ಗಳ ಮೂಲಕ ಹಳ್ಳಕ್ಕೆ ನೀರು ಹರಿಸುವುದು, ಸೈಪನ್‍ಗಳ ಮೂಲಕ ಮಣ್ಣಿನ ಏರಿಯಲ್ಲಿ ನೀರನ್ನು ಎತ್ತಿಕೊಳ್ಳುವುದು, ಕಾಲುವೆ ಜಾಲದಲ್ಲಿ ಪಂಪುಗಳ ಮೂಲಕ ನೀರು ಎತ್ತುವುದನ್ನು ನೀರಾವರಿ ಕಾಯ್ದೆಯಡಿ ನಿರ್ಬಂಧಿಸಲಾಗಿದೆ. ಈ ಪರಿಸ್ಥಿತಿ ಕಂಡುಬಂದರೆ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ರೈತರು ಕೃಷ್ಣಾ ಮೇಲ್ದಂಡೆ ಯೋಜನೆ ಅಧಿಸೂಚಿತ ಅಚ್ಚುಕಟ್ಟು ಪ್ರದೇಶದಲ್ಲಿ ಲಘು ನೀರಾವರಿ ಬೆಳೆಗಳನ್ನು ಮಾತ್ರ ಬೆಳೆಯಲು ವಿನಂತಿಸಲಾಗಿದೆ. ನೀರಿನ ಬಳಕೆಯಲ್ಲಿ ಮಿತವ್ಯಯ ಸಾಧಿಸಲು ಹಾಗೂ ಈ ನಿಟ್ಟಿನಲ್ಲಿ ನಿಗಮ ನಿಯಮಿತದ ಅಧಿಕಾರಿಗಳಿಗೆ ಸಹಕಾರ ನೀಡಲು ಕೋರಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.