ಶಹಾಪುರ (ಯಾದಗಿರಿ ಜಿಲ್ಲೆ): ಪ್ರಸವ ವೇದನೆ ತಾಳದೇ ಗರ್ಭಿಣಿಯೊಬ್ಬರು ಶೌಚಕ್ಕೆಂದು ಸಾರ್ವಜನಿಕ ಶೌಚಾಲಯಕ್ಕೆ ತೆರಳಿದ್ದಾಗಲೇ ಹೆರಿಗೆಯಾದ ಘಟನೆ ಶನಿವಾರ ಸಂಜೆ ನಗರದ ತರಕಾರಿ ಮಾರುಕಟ್ಟೆಯಲ್ಲಿ ನಡೆದಿದೆ.
ತಾಲೂಕಿನ ಮಡ್ನಾಳ ಗ್ರಾಮದ ಮಂಜುಳಾ ನಾಗಪ್ಪ ಎನ್ನುವ ಮಹಿಳೆ ಸಾರ್ವಜನಿಕ ಶೌಚಾಲಯದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಬೆಳಿಗ್ಗೆ ಪ್ರಸವ ವೇದನೆ ಕಾಣಿಸಿದ ಹಿನ್ನೆಲೆಯಲ್ಲಿ ಪತಿ ನಾಗಪ್ಪರೊಂದಿಗೆ ನಗರ ಖಾಸಗಿ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಂಡಿದ್ದಾರೆ. ಹೆರಿಗೆ ಸಮಯಕ್ಕೆ ಸಾಕಷ್ಟು ಕಾಲಾವಕಾಶವಿದೆ ಹೋಗಿ ಎಂದು ವೈದ್ಯರ ಸಲಹೆ ಮೆರೆಗೆ ಗ್ರಾಮಕ್ಕೆ ತೆರಳಿದರು.
ನಂತರ ವೇದನೆ ಹೆಚ್ಚಾಗಿದ್ದರಿಂದ ಮತ್ತೆ ನಗರಕ್ಕೆ ಮರಳಿದ್ದಾರೆ. ಈ ವೇಳೆ ನಗರದ ತರಕಾರಿ ಮಾರುಕಟ್ಟೆಯಲ್ಲಿರುವ ಸಾರ್ವಜನಿಕ ಶೌಚಾಲಯಕ್ಕೆ ಮೂತ್ರ ವಿಸರ್ಜನೆಗೆಂದು ತೆರಳಿದ್ದರು. ಅಲ್ಲಿಯೇ ಮಗುವಿಗೆ ಜನ್ಮ ನೀಡಿದರು. ಶೌಚಾಲಯದ ನಿರ್ವಹಣೆ ಮಾಡುತ್ತಿದ್ದ ಕರಿಷ್ಮಾ ಹೆರಿಗೆ ನೋವು ಶುರುವಾಗುತ್ತಿದ್ದಂತೆ ಹತ್ತಿರದ ಮಹಿಳೆಯರನ್ನು ಕರೆದು ಹೆರಿಗೆ ಮಾಡಿಸಿದರು.
ನಂತರ ಪತಿಯೊಂದಿಗೆ ಸಾರ್ವಜನಿಕ ಆಸ್ಪತ್ರೆಗೆ ತೆರಳಿದ್ದಾರೆ. ಸದ್ಯ ತಾಯಿ ಮಗು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಯಿ, ಮಗು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.