ಯಾದಗಿರಿ: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆಮ್ಲಜನಕ ಉತ್ಪಾದನಾ ಘಟಕ ನಿರ್ಮಾಣದ ಕಾರ್ಯ ಸಮರೋಪಾದಿಯಲ್ಲಿ ನಡೆದಿದೆ ಎಂದು ಜಿಲ್ಲಾಧಿಕಾರಿ ರಾಗಪ್ರಿಯಾ.ಆರ್ ತಿಳಿಸಿದ್ದಾರೆ.
ಜಿಲ್ಲಾ ಕೋವಿಡ್ ಆಸ್ಪತ್ರೆ ಬಳಿ ಆಮ್ಲಜನಕ ಉತ್ಪಾದನಾ ಘಟಕದ ಪ್ರಮುಖ ಸಾಧನವಾಗಿರುವ ಬೃಹತ್ ಕಂಟೇನರ್ ಅನ್ನು ಇಳಿಸಿದ ವೇಳೆ ಭೇಟಿ ಮಾತನಾಡಿದರು.
ಪ್ರತಿ ಒಂದು ನಿಮಿಷಕ್ಕೆ 500 ಲೀಟರ್ ಆಮ್ಲಜನಕ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದ್ದು, ಇದರಿಂದ ನಿತ್ಯ 70 ರಿಂದ 80 ರೋಗಿಗಳಿಗೆ ನಿರಂತರವಾಗಿ ಆಮ್ಲಜನಕ ಪೂರೈಕೆ ಮಾಡಬಹುದಾಗಿದೆ. ಇದರಿಂದ ಜಿಲ್ಲೆಯಲ್ಲಿರುವ ಕೋವಿಡ್ ರೋಗಿಗಳಿಗೆ ಆಮ್ಲಜನಕ ಸಮಸ್ಯೆ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುಮಾರು 4 ಟನ್ ತೂಕವಿರುವ ಆಮ್ಲಜನಕ ಉತ್ಪಾದನೆ ಮಾಡುವ ಈ ಕಂಟೇನರ್ ಅನ್ನು ಇಸ್ರೇಲ್ ಸರ್ಕಾರ ದಾನವಾಗಿ ನೀಡಿದೆ. ಭಾರತ ದೇಶಕ್ಕೆ ಇಸ್ರೇಲ್ ಸರ್ಕಾರ ಒಟ್ಟು ಮೂರು ಕಂಟೇನರ್ಗಳನ್ನು ನೀಡಿದೆ. ಈ ಪೈಕಿ ರಾಜ್ಯಕ್ಕೆ ಎರಡು ದೊರೆತಿದ್ದು, ರಾಜ್ಯ ಕೈಗಾರಿಕೆ ಇಲಾಖೆಯು ಯಾದಗಿರಿ ಮತ್ತು ಕೋಲಾರ ಜಿಲ್ಲೆಗೆ ತಲಾ ಒಂದೊಂದು ಕಂಟೇನರ್ ನೀಡಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ( ಎನ್ಡಿಆರ್ಎಫ್) ಬಂದಿಳಿಸಿದ್ದು, ಶೀಘ್ರದಲ್ಲೇ ಇದರ ಕಾರ್ಯಾರಂಭಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು.
ಈ ವೇಳೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಲ್ಯಾಣ ಕರ್ನಾಟಕ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಬಾಬುರೆಡ್ಡಿ, ರಾಯಚೂರು ಮತ್ತು ಯಾದಗಿರಿ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವೀರಭೂಷಣ್ ಶೆಟ್ಟಿ, ಯಾದಗಿರಿ ಸಹಾಯಕ ಎಂಜಿನಿಯರ್ ಧನರಾಜ್ ಚವಾಣ್, ಸಹಾಯಕ ಔಷಧ ನಿಯಂತ್ರಕ ಅಧಿಕಾರಿ
ಪ್ರಿಯಾರಾಜನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.