ಕಕ್ಕೇರಾ: ಪಟ್ಟಣ ಸಮೀಪದ ಮಂಜಲಾಪುರದ ಹೈಯಾಳಲಿಂಗೇಶ್ವರ ಡೊಳ್ಳಿನ ಕಲಾತಂಡ ಅ.24ರಂದು ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಅದ್ಬುತ ಪ್ರದರ್ಶನ ನೀಡಿ ನೋಡುಗರ ಮೆಚ್ಚುಗೆ ಪಡೆದಿದೆ.
ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಡೊಳ್ಳಿನ ತಂಡದ ಸದಸ್ಯ ನಿಂಗಣ್ಣ ಮಂಜಲಾಪುರ, ‘ಪ್ರಥಮಬಾರಿಗೆ ನಾಡಹಬ್ಬ ಮೈಸೂರು ದಸರಾದಲ್ಲಿ ನಮ್ಮ ತಂಡ ಭಾಗಿಯಾಗಿತ್ತು. ಸಾವಿರಾರು ಕಲಾವಿದರೊಂದಿಗೆ ನಾವು, ನಮ್ಮ ಉತ್ತರಕರ್ನಾಟಕದ ಅಚ್ಚುಮೆಚ್ಚಿನ ಡೊಳ್ಳು ಕುಣಿತ ಪ್ರದರ್ಶನ ನೀಡಿದ್ದೇವೆ’ ಎಂದು ತಿಳಿಸಿದರು.
‘ಈ ಹಿಂದೆ ದೆಹಲಿಯಲ್ಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮುಂದೆ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದೆವು. ನಮ್ಮ ಸಂಘ ಆರಂಭವಾಗಿ ಸುಮಾರು 10 ವರ್ಷ ಕಳೆದ ಮೇಲೆ ದೆಹಲಿ, ವಿಶ್ವವಿಖ್ಯಾತ ಮೈಸರು ಸೇರಿದಂತೆ ವಿವಿಧೆಡೆ ಪ್ರದರ್ಶನ ನೀಡುತ್ತಿದ್ದು, ಜನಮನ್ನಣೆ ಸಿಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು ಹಿರಿಯ ಸದಸ್ಯ ಬೀರಲಿಂಗಪ್ಪ ಪೂಜಾರಿ.
ಮಂಜಲಾಪುರ ವಿವಿಧ ಸೌಲಭ್ಯ ವಂಚಿತ ಗ್ರಾಮವಾದರೂ ಕಲೆಯ ಮೂಲಕ ಗುರುತಿಸಿಕೊಳ್ಳುತ್ತಿದೆ. ಹೈಯಾಳಲಿಂಗೇಶ್ವರ ಡೊಳ್ಳಿನ ಕಲಾತಂಡದ ಸಾಧನೆಗೆ ಒಗ್ಗಟ್ಟು ಪ್ರದರ್ಶನವೇ ಕಾರಣ ಎಂದು ಸದಸ್ಯರು ಹೇಳುತ್ತಾರೆ. ನಮಗೆಲ್ಲಾ ತಂಡದ ಪ್ರಕಾಶ ಕನ್ನಳ್ಳಿ ಸೌಲಭ್ಯ ಒದಗಿಸಿ ಕೊಟ್ಟಿದ್ದರು ಎಂದು ಕಲಾವಿದರು ಮೆಚ್ಚುಗೆ ವ್ಯಕ್ತಪಡಿಸಿದರು.
ನಮ್ಮ ಸಂಘವು ಈ ಹಿಂದೆ ದೆಹಲಿ ಪ್ರಸ್ತುತ ದಸರಾ ಮೈಸೂರಿನಲ್ಲಿ ಒಗ್ಗಟ್ಟಿನಿಂದ ಉತ್ತಮ ಪ್ರದರ್ಶನ ನೀಡಿದ್ದು ಖುಷಿಯಾಗಿದೆಬೀರಲಿಂಗಪ್ಪ ಪೂಜಾರಿ ತಂಡದ ಮುಖ್ಯಸ್ಥ
ನಮ್ಮೂರಿನ ಹೈಯಾಳಲಿಂಗೇಶ್ವರ ಡೊಳ್ಳಿನ ತಂಡದ ಸಾಧನೆ ನಿಜಕ್ಕೂ ಮೆಚ್ಚುವಂತಹದ್ದು ಅವರ ಸಾಧನೆಗೆ ಸರ್ಕಾರ ಪ್ರೋತ್ಸಾಹಿಸಬೇಕಿದೆಮಲ್ಲಣ್ಣ ಗೋಡಿಹಾಳ ಮುಖಂಡ
ಹೈಯಾಳಲಿಂಗೇಶ್ವರ ಡೊಳ್ಳಿನ ತಂಡ ಉತ್ತಮ ತಂಡವಾಗಿದ್ದು ಅವರ ಪರಿಶ್ರಮದಿಂದ ಗುರುತಿಸಿಕೊಂಡಿದ್ದಾರೆ.ಪ್ರಕಾಶ ಅಂಗಡಿ ಕನ್ನಳ್ಳಿ ಸಗರನಾಡು ಸೇವಾಪ್ರತಿಷ್ಠಾನ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.