ಮಳೆಯಿಂದ ಜಮೀನಿನಲ್ಲಿ ನೀರು ಸಂಗ್ರಹವಾದ ಪ್ರದೇಶಕ್ಕೆ ಜೆಡಿ ರತೇಂದ್ರಕುಮಾರ ಸೂಗೂರ ಭೇಟಿ ನೀಡಿ ಪರಿಶೀಲಿಸಿದರು
ಶಹಾಪುರ: ನೆರೆ ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದಿಂದ ನಾರಾಯಣಪುರ ಜಲಾಯಶಯದಿಂದ 2 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿಬಿಡಲಾಗಿದೆ. ಇದರಿಂದ ನದಿ ಪಾತ್ರದ ಗ್ರಾಮಗಳಿಗೆ ಪ್ರವಾಹದ ಭೀತಿ ಉಂಟಾಗಿದೆ. ಸಹಾಯವಾಣಿ ಹಾಗೂ ಕಾಳಜಿ ಕೇಂದ್ರ ಸ್ಥಾಪಿಸಲು ಗುರುತಿಸಲಾಗಿದೆ ಎಂದು ತಹಶೀಲ್ದಾರ್ ಸಿದ್ಧಾರೂಢ ಬನ್ನಿಕೊಪ್ಪ ತಿಳಿಸಿದರು.
ಕೃಷ್ಣಾ ನದಿ ಪಾತ್ರದ ಗ್ರಾಮಗಳಾದ ಕೊಳ್ಳೂರ(ಎಂ), ಮರಕಲ್, ಗೌಡೂರ, ಟೊಣ್ಣುರ, ಯಕ್ಷಿಂತಿ, ಗೊಂದೆನೂರ ತುಮಕೂರ ಮುಂತಾದ ಗ್ರಾಮಗಳಿಗೆ ಪ್ರವಾಹದ ನೀರು ನುಗ್ಗುವ ಅಪಾಯವಿದೆ. ಜಿಲ್ಲಾಧಿಕಾರಿ ನಿರ್ದೇಶನದಂತೆ ಪ್ರವಾಹ ವಿಕೋಪದಿಂದ ಹಾನಿ ಉಂಟಾದರೆ ತಕ್ಷಣ ಪರಿಹಾರಕ್ಕೆ 24/7 ಸಹಾಯವಾಣಿ 08479-243321 ಸಂಖ್ಯೆಗೆ ಸಾರ್ವಜನಿಕರು ಕರೆ ಮಾಡಿ ಮಾಹಿತಿ ನೀಡಬಹುದು. ಅಲ್ಲದೆ ಪ್ರವಾಹದಿಂದ ಸಂಕಷ್ಟ ಎದುರಾದರೆ ಆಯಾ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಕಾಳಜಿ ಕೇಂದ್ರ ಸ್ಥಾಪಿಸಲಾಗುವುದು ಎಂದು ಹೇಳಿದರು.
ಸಂಚಾರ ಸ್ಥಗಿತದ ಆತಂಕ: ದೇವದುರ್ಗ-ಶಹಾಪುರ ರಾಜ್ಯ ಹೆದ್ದಾರಿಯು ತಾಲ್ಲೂಕಿನ ಕೊಳ್ಳೂರ(ಎಂ) ಬಳಿಯ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ರಸ್ತೆ ಸಂಚಾರಕ್ಕೆ ಅವಲಂಬನೆ ಆಗಿದೆ. ಕೃಷ್ಣಾ ನದಿಗೆ ಹೆಚ್ಚಿನ ನೀರು ಬರುತ್ತಿರುವುದಿಂದ ಸೇತುವೆ ಮುಳಗಡೆಯ ಆತಂಕ ಶುರವಾಗಿದ್ದು, ಸಂಚಾರ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. 2 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಬಂದರೆ ಸೇತುವೆ ಮುಳುಗಡೆಯಾಗುತ್ತದೆ. ಇದು ಪ್ರತಿ ವರ್ಷ ನಮ್ಮ ಬವಣೆ ತಪ್ಪಿದ್ದಲ್ಲ ಎನ್ನುತ್ತಾರೆ ಕೊಳ್ಳೂರ(ಎಂ) ಗ್ರಾಮದ ನಿವಾಸಿ ಹಣಮಂತ ಭಂಗಿ.
ಗೌಡೂರ ಕುಡಿಯುವ ನೀರಿನ ಸಮಸ್ಯೆ: ತಾಲ್ಲೂಕಿನ ಗೌಡೂರ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿದ್ದರಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಗ್ರಾಮದಲ್ಲಿ ಉಪ್ಪು ಮಿಶ್ರಿತ ನೀರು ಇರುವುದರಿಂದ ಕುಡಿಯಲು ಯೋಗ್ಯ ಇಲ್ಲ. ಅನಿವಾರ್ಯವಾಗಿ 4 ಕಿ.ಮೀ ದೂರದ ಕೊಳ್ಳೂರ ಗ್ರಾಮಕ್ಕೆ ಬಂದು ಶುದ್ಧ ಕುಡಿಯುವ ನೀರು ತೆಗೆದುಕೊಂಡು ಹೋಗುತ್ತೇವೆ ಎಂದು ಗ್ರಾಮದ ನಿವಾಸಿ ದೇವೇಂದ್ರ ಚಲುವಾದಿ ತಿಳಿಸಿದರು.
ಆರೋಗ್ಯ ಕೇಂದ್ರ ಸ್ಥಾಪಿಸಿ: ಕೃಷ್ಣಾ ನದಿ ಪಾತ್ರದ ಗ್ರಾಮದಲ್ಲಿ ತಾತ್ಕಾಲಿಕವಾಗಿ ಆರೋಗ್ಯ ಕೇಂದ್ರ ಸ್ಥಾಪಿಸಿ ಸಕಲ ಔಷಧ ವ್ಯವಸ್ಥೆ ಮಾಡಬೇಕು. ಈಗಾಗಲೇ ಜಿಟಿಜಿಟಿ ಮಳೆಯಿಂದ ವೃದ್ಧರಲ್ಲಿ ಹಾಗೂ ಚಿಕ್ಕಮಕ್ಕಳಲ್ಲಿ ಶೀತ, ನೆಗಡಿ, ಜ್ವರ ಕಾಣಿಸಿಕೊಂಡಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಆಯಾ ಶಾಲೆಯಲ್ಲಿ ಆರೋಗ್ಯ ಕೇಂದ್ರ ಸ್ಥಾಪಿಸುವಂತೆ ನದಿ ಪಾತ್ರದ ಗ್ರಾಮದ ಜನ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.