ಯಾದಗಿರಿಯ ಭೀಮಾ ನದಿ ತೀರದಲ್ಲಿ ಪ್ರವಾಹಕ್ಕೆ ಸಿಲುಕಿ ಒಣಗಿರುವ ಭತ್ತ
ಪ್ರಜಾವಾಣಿ ಚಿತ್ರ: ರಾಜಕುಮಾರ ನಳ್ಳಿಕರ
ಯಾದಗಿರಿ: ಜಿಲ್ಲೆಯಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಅಧಿಕ ಮಳೆ ಹಾಗೂ ಭೀಮಾ ನದಿಯ ಪ್ರವಾಹದಿಂದಾದ ಬೆಳೆ ಹಾನಿ ಕುರಿತು ಕೈಗೊಂಡಿದ್ದ ಜಂಟಿ ಸಮೀಕ್ಷೆ ಪೂರ್ಣಗೊಂಡಿದೆ. 1.61 ಲಕ್ಷ ರೈತರ ಒಟ್ಟು 1.42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳಿಗೆ ಹಾನಿಯಾಗಿದೆ.
ಆಗಸ್ಟ್ ತಿಂಗಳಿಂದಲೇ ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಗಳು ಜಂಟಿ ಸಮೀಕ್ಷೆ ಕೈಗೊಂಡಿದ್ದರು. ಸೆಪ್ಟೆಂಬರ್ ಎರಡನೇ ವಾರದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಸಭೆ ಮಾಡಿದ್ದ ಸಿಎಂ, 10 ದಿನಗಳಲ್ಲಿ ಬೆಳೆ ಹಾನಿಯ ವರದಿ ಸಲ್ಲಿಕೆಗೆ ಗುಡುವು ನೀಡಿದ್ದರು. ವರದಿ ಅಂತಿಮ ಆಗುವ ವೇಳೆಗೆ ಮಹಾರಾಷ್ಟ್ರದ ಭೀಮಾ ಕಣಿವೆಯ ಜಲಾಶಯಗಳಿಂದ ಯಥೇಚ್ಛ ಪ್ರಮಾಣದ ನೀರು ಭೀಮಾ ನದಿಗೆ ಹರಿಸಲಾಗಿತ್ತು. ಇದರಿಂದ ‘ಮಹಾ’ ಪ್ರವಾಹ ಸಂಭವಿಸಿ ಹಾನಿಯ ಪ್ರಮಾಣವೂ ಹೆಚ್ಚಾಗಿ, ಅಧಿಕಾರಿಗಳು ಮತ್ತೊಮ್ಮೆ ಸಮೀಕ್ಷೆ ಮಾಡಬೇಕಾಯಿತು.
ಈಗ ಹಾನಿಯ ಸಮೀಕ್ಷೆಯು ಪೂರ್ಣಗೊಂಡಿದೆ. ಶಹಾಪುರ ತಾಲ್ಲೂಕಿನಲ್ಲಿ ಅತ್ಯಧಿಕ 39,996 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳಿಗೆ ಹಾನಿಯಾಗಿದೆ. ನಂತರದ ಸ್ಥಾನದಲ್ಲಿ ವಡಗೇರಾ ತಾಲ್ಲೂಕು 28,360, ಯಾದಗಿರಿ ತಾಲ್ಲೂಕು 23,426, ಸುರಪುರ ತಾಲ್ಲೂಕು 20,831, ಹುಣಸಗಿ ತಾಲ್ಲೂಕು 20,627 ಹಾಗೂ ಗುರುಮಠಕಲ್ ತಾಲ್ಲೂಕಿನಲ್ಲಿ 9,019 ಹೆಕ್ಟೇರ್ ಪ್ರದೇಶದಲ್ಲಿ ಹಲವು ಬೆಳೆಗಳು ಅತಿವೃಷ್ಟಿ ಹಾಗೂ ಪ್ರವಾಹಕ್ಕೆ ತುತ್ತಾಗಿವೆ.
ಶಹಾಪುರ ತಾಲ್ಲೂಕಿನ 38,552, ವಡಗೇರಾ ತಾಲ್ಲೂಕಿನ 25,914, ಯಾದಗಿರಿ ತಾಲ್ಲೂಕಿನ 35,481, ಸುರಪುರ ತಾಲ್ಲೂಕಿನ 24343, ಹುಣಸಗಿ ತಾಲ್ಲೂಕಿನ 23,570 ಹಾಗೂ ಗುರುಮಠಕಲ್ ತಾಲ್ಲೂಕಿನ 13,536 ರೈತರು ತಮ್ಮ ಬೆಳೆಗಳನ್ನು ಕಳೆದುಕೊಂಡಿದ್ದಾರೆ. ಅದರಲ್ಲಿ ಹತ್ತಿ ಬೆಳೆಯನ್ನು ಕಳೆದುಕೊಂಡವರ ಪಾಲವೇ ಅಗ್ರವಾಗಿದೆ.
ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಭತ್ತ, ಮೆಕ್ಕೆಜೋಳ, ಸಜ್ಜೆ, ತೊಗರಿ, ಹೆಸರು, ಉದ್ದು, ಶೇಂಗಾ, ಸೂರ್ಯಕಾಂತಿ, ಹತ್ತಿ ಸೇರಿ 4.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಅದರಲ್ಲಿ 2.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿಯೇ ಬಿತ್ತನೆ ಮಾಡಲಾಗಿತ್ತು. ಕಳೆದ ವರ್ಷ ಉತ್ತಮ ಇಳುವರಿ ಬಂದು, ಒಳ್ಳೆಯ ಬೆಲೆ ಸಿಕ್ಕಿದ್ದರಿಂದ ಸಹಜವಾಗಿ ರೈತರು ಹತ್ತಿಯತ್ತ ಮುಖ ಮಾಡಿದ್ದರು. ಆದರೆ. ಅತಿವೃಷ್ಟಿ ಹಾಗೂ ಪ್ರವಾಹ ಹತ್ತಿ ಬೆಳೆ ಹಾಗೂ ಬೆಳೆಗಾರರ ಬದುಕನ್ನು ಕಪ್ಪಾಗಿಸಿದೆ.
ಹಾನಿಯಾದ ಒಟ್ಟಾರೆ 1.42 ಲಕ್ಷ ಹೆಕ್ಟೇರ್ ಪ್ರದೇಶ ಪೈಕಿ ಹತ್ತಿ ಬೆಳೆಯ ಪಾಲು 1.05 ಲಕ್ಷ ಹೆಕ್ಟೇರ್ನಷ್ಟಿದೆ. ಬಿತ್ತನೆಯಾದ ಅರ್ಧಷ್ಟು ಹತ್ತಿಯು ನೀರು ಪಾಲಾಗಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತಿದ್ದ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿ, ಸರ್ಕಾರದ ಪರಿಹಾರದತ್ತ ಮುಖಮಾಡಿದ್ದಾರೆ. ಹೊಲಗಳಲ್ಲಿ ಅಸ್ಥಿಪಂಜರದಂತೆ ಕಪ್ಪಾಗಿ ಒಣಗಿರುವ ಗಿಡುಗಳನ್ನು ಕಿತ್ತಿ, ಜಮೀನು ಹದಗೊಳಿಸಿ ಮತ್ತೆ ಬಿತ್ತನೆ ಮಾಡಲು ಬೆಳೆಗಾರರು ಸಾವಿರಾರು ರೂಪಾಯಿ ವ್ಯಯಿಸಿದ್ದಾರೆ.
1.42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದೆ. ಹಾನಿಯ ಮೌಲ್ಯ ₹ 175 ಕೋಟಿಯಷ್ಟು ಆಗಬಹುದುರತೇಂದ್ರನಾಥ ಸೂಗುರ ಜಂಟಿ ಕೃಷಿ ನಿರ್ದೇಶಕ
403 ಹೆಕ್ಟೇರ್ನಲ್ಲಿನ ತೋಟಗಾರಿಕೆ ಬೆಳೆ ಹಾನಿ
ನೀರಿನ ಸಮೃದ್ಧ ನೆಲೆ ಇರುವುದರಿಂದ ತೋಟಗಾರಿಕಾ ಬೆಳೆಗಳ ಪ್ರಮಾಣವು ಹೆಚ್ಚಿದ್ದು ಅತಿವೃಷ್ಟಿ ಹಾಗೂ ನೆರೆಗೆ 403 ಹೆಕ್ಟೇರ್ ಪ್ರದೇಶದಲ್ಲಿನ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ. ಕೃಷ್ಣಾ ಜಲಾನಯನ ಪ್ರದೇಶದ ಕಾಲುವೆಗಳ ಪ್ರದೇಶ ಹಾಗೂ ಭೀಮಾ ನದಿ ತೀರದ ಎರಡೂ ಬದಿಯಲ್ಲಿ ಮೆಣಸಿನಕಾಯಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಸಹಜವಾಗಿ ಬೆಳೆ ಹಾನಿಯಲ್ಲಿ ಮೆಣಸಿನಕಾಯಿಯದ್ದು ಅಗ್ರ ಸ್ಥಾನದಲ್ಲಿದ್ದು 176 ಹೆಕ್ಟೇರ್ ಪ್ರದೇಶದಲ್ಲಿನ ಮೆಣಸಿನಕಾಯಿಗೆ ಹಾನಿಯಾಗಿದೆ. ನಂತರದ ಸ್ಥಾನದಲ್ಲಿ ಪಪ್ಪಾಯ (75 ಹೆಕ್ಟೇರ್) ದಾಳಿಂಬೆ (35 ಹೆಕ್ಟೇರ್) ಈರುಳ್ಳಿ (24 ಹೆಕ್ಟೇರ್) ಟೊಮೆಟೊ (24 ಹೆಕ್ಟೇರ್) ಬೆಳೆಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.