ಕಕ್ಕೇರಾ: ಇತ್ತೀಚೆಗೆ ಎಲ್ಲೆಡೆ ಸುರಿದ ನಿರಂತರ ಮಳೆಗೆ ಹತ್ತಿ, ತೊಗರಿ ಇನ್ನಿತರ ಬೆಳೆಗಳು ಹುಲಸಾಗಿ ಬೆಳೆದಿದ್ದು, ರೈತರು ಜಮೀನುಗಳು ಹಸಿರಿನಿಂದ ಕಂಗೊಳಿಸುತ್ತಿವೆ.
ಮಳೆಯು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದು, ಸುಮಾರು ತಿಂಗಳಿನಿಂದ ಮಳೆಯಿಲ್ಲದೇ ರೈತರು ಕೃಷಿ ಚಟುವಟಿಕೆಯತ್ತ ಮನಸ್ಸು ಮಾಡಿರಲಿಲ್ಲ. ಸದ್ಯ ಹತ್ತಿ, ತೊಗರಿ, ಸಜ್ಜಿ ಬೆಳೆ ಜಮೀನುಗಳಲ್ಲಿ ಕೆಲಸದಲ್ಲಿ ತೊಡಗಿದ್ದಾರೆ.
‘ಕಳೆದ ವರ್ಷ ಮೂರು ಬೆಳೆಗಳನ್ನು ಬೆಳೆದಿದ್ದೆವು. ಆದರೆ ಈ ವರ್ಷ ಮಳೆ ಅಭಾವದಿಂದ ಎರಡು ಬೆಳೆಗಳನ್ನು ಮಾತ್ರ ಬೆಳೆಯಲು ಸಾಧ್ಯವಾಗಿದೆ.ಮಳೆಯಿಂದ ಫಸಲು ಉತ್ತಮವಾಗಿ ಬರುವ ಸಾಧ್ಯತೆಯಿದ್ದು, ಸರ್ಕಾರ ರೈತರ ಬೆಳೆಗೆ ಉತ್ತಮ ಬೆಲೆ ಕಲ್ಪಿಸಬೇಕು’ ಎಂದು ರೈತ ಸಂಗಯ್ಯಸ್ವಾಮಿ ಹೇಳಿದರು.
ಕೆಬಿಜೆಎನ್ಎಲ್ ಮುಖ್ಯ ಕಾಲುವೆಯಲ್ಲಿ ನೀರು ಹರಿಸಲಾಗುತ್ತಿದ್ದು, ಕಾಲುವೆಯಲ್ಲಿ ಜಂಗಲ್ ಕಟಿಂಗ್ ಸೇರಿದಂತೆ ಸಣ್ಣಪುಟ್ಟ ಕಾಮಗಾರಿಗಳನ್ನೂ ಕೈಗೊಳ್ಳದೇ ನೀರು ಹರಿಸಲಾಗುತ್ತಿದೆ. ಇದರಿಂದಾಗಿ ಕೊನೆ ಭಾಗದ ರೈತರಿಗೆ ನೀರು ತಲುಪುವುದಿಲ್ಲ. ಕೆಬಿಜೆಎನ್ಎಲ್ ಅಧಿಕಾರಿಗಳ ವರ್ತನೆ, ಕಾರ್ಯವೈಖರಿ ಬೇಸರ ಮೂಡಿಸಿದೆ ಎಂದು ರೈತರಾದ ಪರಮಣ್ಣ ಜಂಪಾ, ಸೋಮಣ್ಣ ಜಂಪಾ, ಚಂದ್ರು ವಜ್ಜಲ್ ಅಸಮಾಧಾನ ವ್ಯಕ್ತಪಡಿಸಿದರು.
‘2021ರಲ್ಲಿ ಗಿಡಗಂಟಿಗಳ ತೆರವು ಕಾರ್ಯ ನಡೆಸಲಾಗಿದೆ. ಇಲಾಖೆಗೆ ಹಣ ಬಾರದ ಕಾರಣ 2022ರಲ್ಲಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಿಲ್ಲ’ ಎಂದು ಕೆಬಿಜೆಎನ್ಎಲ್ನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಎ.ರಂಜಾನ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.