ADVERTISEMENT

ಯಾದಗಿರಿ | ಹಳೆ ವೈಷಮ್ಯ: ಎಸ್‌ಡಿಎ ಅಂಜಲಿ ಕಂಬಾನೂರ ಕೊಲೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 11:08 IST
Last Updated 12 ನವೆಂಬರ್ 2025, 11:08 IST
<div class="paragraphs"><p>ಅಂಜಲಿ ಗಿರೀಶ ಕಂಬಾನೂರ</p></div>

ಅಂಜಲಿ ಗಿರೀಶ ಕಂಬಾನೂರ

   

ಯಾದಗಿರಿ: ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ದ್ವಿತೀಯ ದರ್ಜೆ ಸಹಾಯಕಿ (ಎಸ್‌ಡಿಎ) ಮೇಲೆ ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಘಟನೆ ಬುಧವಾರ ನಡೆದಿದೆ.

ಎಸ್‌ಡಿಎ ಅಂಜಲಿ ಗಿರೀಶ ಕಂಬಾನೂರ ಹಲ್ಲೆಗೆ ಒಳಗಾಗಿದ್ದು, ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾದಗಿರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೃತ್ಯ ನಡೆದಿದೆ.

ADVERTISEMENT

ಶಹಾಬಾದ್ ನಗರಸಭೆಯ ಮಾಜಿ ಅಧ್ಯಕ್ಷೆಯಾಗಿದ್ದ‌ ಅಂಜಲಿ ಅವರು ಎರಡು ವರ್ಷಗಳ ಹಿಂದೆ ಎಸ್‌ಸಿ, ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ಅನುಕಂಪದ ಆಧಾರದ ಎಸ್‌ಡಿಎ ಹುದ್ದೆ ಪಡೆದಿದ್ದರು.

‘ನಗರದಲ್ಲಿ ವಾಸವಿದ್ದ ಅಂಜಲಿ, ಎಂದಿನಂತೆ ಬೆಳಿಗ್ಗೆ ಕಾರಿನಲ್ಲಿ ಕಚೇರಿಗೆ ತೆರಳುತ್ತಿದ್ದರು. ಗ್ರೀನ್ ಸಿಟಿ ಸಮೀಪ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಅಂಜಲಿ ಕುಳಿತಿದ್ದ ಕಾರು ಅಡ್ಡಗಟ್ಟಿದ್ದರು. ಮಾರಕಾಸ್ತ್ರಗಳಿಂದ ಕಾರಿನ ಗಾಜು ಹೊಡೆದರು. ಅಂಜಲಿಯ ಮುಖ, ಕೈ, ಬೆನ್ನಿನ ಮೇಲೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿ ಪರಾರಿಯಾದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯನ್ನು ಚಾಲಕ ತಕ್ಷಣವೇ ‘ಯಿಮ್ಸ್‌’ಗೆ ಕರೆದೊಯ್ದರು’ ಎಂದು ಎಸ್‌ಪಿ ಪೃಥ್ವಿಕ್ ಶಂಕರ್ ತಿಳಿಸಿದರು.

ಅಂಜಲಿ ಅವರು ಮಾಜಿ ಕಾರ್ಮಿಕ ಸಚಿವ ದಿ. ಸಿ.ಗುರುನಾಥ ಅವರ ಅಣ್ಣನ ಸೊಸೆ. ಆಕೆಯ ಗಂಡ ಗಿರೀಶ (2022) ಹಾಗೂ ಮೈದುನ ಸತೀಶ ಕಂಬಾನೂರ (2020) ಅವರು ಕೊಲೆಯಾಗಿದ್ದರು. ಗಿರೀಶ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಶಂಕರ ಅಳ್ಳೊಳ್ಳಿ ಮೇಲೆ ಇದೇ ಸೆಪ್ಟೆಂಬರ್‌ನಲ್ಲಿ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿತ್ತು. ಹೈವೇ ಪೆಟ್ರೋಲಿಂಗ್ ಸಿಬ್ಬಂದಿಯಿಂದ ಆತ ಪಾರಾಗಿದ್ದ. ತನ್ನ ಮೇಲಿನ ದಾಳಿಗೆ ಅಂಜಲಿಯೇ ಕಾರಣವೆಂದು ಶಂಕಿಸಿ, ಶಂಕರ ಅವರು ದಾಳಿ ಮಾಡಿಸಿರುವ ಅನುಮಾನವಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.