ADVERTISEMENT

ಪಶ್ಚಿಮ ಬಂಗಾಳದ 'ಕರ್ಮ ಭೂಮಿ' ಆ್ಯಪ್ ಬಳಸಿ ಉದ್ಯೋಗ ಪಡೆದ 8000 ಐಟಿ ವೃತ್ತಿಪರರು

ಪಿಟಿಐ
Published 28 ನವೆಂಬರ್ 2020, 8:18 IST
Last Updated 28 ನವೆಂಬರ್ 2020, 8:18 IST
   

ಕೋಲ್ಕತಾ: ಕೋವಿಡ್‌-19 ಕಾರಣದಿಂದಾಗಿ ಇತರ ಸ್ಥಳಗಳಿಂದ ಪಶ್ಚಿಮ ಬಂಗಾಳಕ್ಕೆ ಮರಳಿದ ಸುಮಾರು 8000 ಐಟಿ ವೃತ್ತಿಪರರು ರಾಜ್ಯ ಸರ್ಕಾರದ 'ಕರ್ಮ ಭೂಮಿ' ಆ್ಯಪ್‌ ಬಳಸಿ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪಶ್ಚಿಮ ಬಂಗಾಳದ ಮಾಹಿತಿ ತಂತ್ರಜ್ಞಾನ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಐಟಿ ವೃತ್ತಿಪರರಿಗಾಗಿ ರಾಜ್ಯ ಐಟಿ ಇಲಾಖೆ 'ಕರ್ಮ ಭೂಮಿ' ಎಂಬ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ.

' ಜಗತ್ತಿನಲ್ಲಿ ಕೋವಿಡ್‌ ಬಂದಿದ್ದರಿಂದ ಭಾರಿ ಪ್ರಮಾಣದ ಐಟಿ ವೃತ್ತಿಪರರು ಹೊರಗಿನಿಂದ ರಾಜ್ಯಕ್ಕೆ ಬಂದಿದ್ದರು' ಎಂದು ಪಶ್ಚಿಮ ಬಂಗಾಳ ಸರ್ಕಾರದ ಐಟಿ ವಿಭಾಗದ ಜಂಟಿ ಕಾರ್ಯದರ್ಶಿ ಸಂಜಯ್ ದಾಸ್ ಹೇಳಿದರು.

ADVERTISEMENT

'ಪ್ರತಿಭೆಗಳನ್ನು ಹೆಕ್ಕುವುದು ಕರ್ಮ ಭೂಮಿ ಆ್ಯಪ್‌ನ ಮೂಲ ಚಿಂತನೆ. ಕೋವಿಡ್‌ ಕಾರಣದಿಂದ ಸೃಷ್ಟಿಯಾದ ಸನ್ನಿವೇಶವು ಅದಕ್ಕೆ ಪೂರಕವಾಗಿತ್ತು,' ಎಂದು ವೆಬಿನಾರ್‌ವೊಂದರಲ್ಲಿ ದಾಸ್‌ ಅಭಿಪ್ರಾಯಪಟ್ಟರು.

'ಕರ್ಮ ಭೂಮಿ' ಆ್ಯಪ್‌ ಎಂಬುದು ಐಟಿ ವಲಯದ ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತರ ನಡುವಿನ ಸಂಪರ್ಕಕ್ಕೆ ಪಶ್ಚಿಮ ಬಂಗಾಳ ರೂಪಿಸಿದ ಉಪಕ್ರಮವೂ ಆಗಿದೆ.

'ಈ ಅಪ್ಲಿಕೇಷನ್ ಉದ್ಯೋಗ ಒದಗಿಸುವ ವೇದಿಕೆಯೇನಲ್ಲ. ಆದರೆ ವೃತ್ತಿಪರರು ತಮ್ಮನ್ನು ನೋಂದಾಯಿಸಿಕೊಳ್ಳುವ ಮೂಲಕ ತಮ್ಮ ಕೌಶಲ ಪ್ರದರ್ಶನ ಮಾಡಿಕೊಳ್ಳಬಹುದು. ಸುಮಾರು 41,000 ವೃತ್ತಿಪರರು 400 ಉದ್ಯೋಗದಾತ ಸಂಸ್ಥೆಗಳೊಂದಿಗೆ ಸಂಪರ್ಕಗೊಂಡಿದ್ದಾರೆ' ಎಂದು ದಾಸ್‌ ಹೇಳಿದರು.

'ಅಪ್ಲಿಕೇಷನ್‌ ಮೂಲಕ 8000 ಮಂದಿ ಕೆಲಸ ಪಡೆದಿದ್ದಾರೆ. ಸಿಂಗಪುರ ಮೂಲದ ಸಂಸ್ಥೆಯೊಂದು ಇದೇ ಅಪ್ಲಿಕೇಷನ್‌ ಮೂಲಕ ಇಬ್ಬರು ವೃತ್ತಪರರನ್ನು ನೇಮಕ ಮಾಡಿಕೊಂಡಿದೆ,' ಎಂದೂ ಅವರು ತಿಳಿಸಿದರು.

ಇದನ್ನು ಮತ್ತಷ್ಟು ವಿಸ್ತರಿಸಲು ಕಾಲೇಜು ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಅಪ್ಲಿಕೇಷನ್‌ ಅನ್ನು ಮುಕ್ತಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.