ADVERTISEMENT

ಸೆಪ್ಟೆಂಬರ್‌ನಲ್ಲಿ ಅಂತಿಮ ಸೆಮಿಸ್ಟರ್‌‌ ಪರೀಕ್ಷೆ ನಡೆಸಲು ಮೈಸೂರು ವಿವಿ ಸಿದ್ಧತೆ

ಪರೀಕ್ಷೆ ಸಿದ್ಧತೆ ಆರಂಭಿಸಿದ ಮೈಸೂರು ವಿಶ್ವವಿದ್ಯಾಲಯ; ಆ.20ರೊಳಗೆ ವೇಳಾಪಟ್ಟಿ ಪ್ರಕಟ

ಡಿ.ಬಿ, ನಾಗರಾಜ
Published 14 ಆಗಸ್ಟ್ 2020, 4:17 IST
Last Updated 14 ಆಗಸ್ಟ್ 2020, 4:17 IST
ಮೈಸೂರು ವಿಶ್ವವಿದ್ಯಾಲಯದ ಲಾಂಛನ
ಮೈಸೂರು ವಿಶ್ವವಿದ್ಯಾಲಯದ ಲಾಂಛನ   

ಮೈಸೂರು: ಪದವಿ, ಸ್ನಾತಕೋತ್ತರ ಪದವಿಯ ಅಂತಿಮ ಸೆಮಿಸ್ಟರ್‌ನ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್‌ನಲ್ಲೇ ಪರೀಕ್ಷೆ ನಡೆಸಲು ಮೈಸೂರು ವಿಶ್ವವಿದ್ಯಾಲಯ ಸಿದ್ಧತೆ ನಡೆಸಿದೆ.

ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ ಮೈಸೂರು ವಿಶ್ವವಿದ್ಯಾಲಯ ಕಾರ್ಯಾ ಚರಿಸುತ್ತಿದ್ದು, 1.11 ಲಕ್ಷ ವಿದ್ಯಾರ್ಥಿಗಳು ಪದವಿ ವ್ಯಾಸಂಗ ಮಾಡುತ್ತಿದ್ದರೆ, 12 ಸಾವಿರದ ಆಸುಪಾಸು ಸ್ನಾತಕೋತ್ತರ ವಿದ್ಯಾರ್ಥಿಗಳಿದ್ದಾರೆ.

‘ಪದವಿಯ ಅಂತಿಮ ಸೆಮಿಸ್ಟರ್‌ನಲ್ಲಿ 35 ಸಾವಿರ ವಿದ್ಯಾರ್ಥಿಗಳಿದ್ದು, ಈ ಎಲ್ಲರಿಗೂ ಆಯಾ ಕಾಲೇಜಿನ ವ್ಯಾಪ್ತಿಯಲ್ಲೇ ಕೋವಿಡ್ ಮುನ್ನೆಚ್ಚರಿಕೆ ಕ್ರಮ ಪಾಲಿಸಿ, ಪರೀಕ್ಷೆ ನಡೆಸಲಾಗು ವುದು. ಈಗಾಗಲೇ ಕಾಲೇಜಿನ ಪ್ರಾಂಶುಪಾಲರಿಗೆ ಈ ಸೂಚನೆಯನ್ನು ರವಾನಿಸಲಾಗಿದೆ’ ಎಂದು ವಿಶ್ವವಿದ್ಯಾಲಯದ ಕುಲಸಚಿವ ಆರ್.ಶಿವಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಮೈಸೂರಿನ ಮಾನಸ ಗಂಗೋತ್ರಿ ಕ್ಯಾಂಪಸ್ ಸೇರಿದಂತೆ ಹಾಸನ, ಮಂಡ್ಯ, ಚಾಮರಾಜನಗರದ ಸ್ನಾತಕೋತ್ತರ ಕೇಂದ್ರಗಳು ಹಾಗೂ 40 ಸಂಯೋಜಿತ ಕಾಲೇಜುಗಳ ಸ್ನಾತಕೋತ್ತರ ಪದವಿ ಕೇಂದ್ರಗಳಲ್ಲಿ 6 ಸಾವಿರದಿಂದ 8 ಸಾವಿರ ವಿದ್ಯಾರ್ಥಿಗಳು ಅಂತಿಮ ಸೆಮಿಸ್ಟರ್‌ನಲ್ಲಿದ್ದಾರೆ. ಇವರಿಗೆ ಆಯಾ ಸ್ನಾತಕೋತ್ತರ ಪದವಿ ಕೇಂದ್ರಗಳಲ್ಲೇ ಪರೀಕ್ಷೆ ನಡೆಸಲು ಸಿದ್ಧತೆ ಆರಂಭಿಸಲಾಗಿದೆ’ ಎಂದರು.

ವಿಚಾರಣೆ ಇಂದು: ‘ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪರೀಕ್ಷೆ ನಡೆಸುವಂತೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಎಲ್ಲ ವಿಶ್ವವಿದ್ಯಾಲಯಗಳಿಗೂ ಸೂಚಿಸಿದೆ. ಇದನ್ನು ಪ್ರಶ್ನಿಸಿ ಕೆಲ ವಿಶ್ವವಿದ್ಯಾಲಯಗಳು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿವೆ. ವಿಪತ್ತು ನಿರ್ವಹಣೆ ಕಾಯ್ದೆಯಡಿ ಪರೀಕ್ಷೆ ನಡೆಸುವುದು ಬೇಡ ಎಂದು ಅರ್ಜಿ ಸಲ್ಲಿಸಿವೆ. ಇದರ ವಿಚಾರಣೆ ಆ.10ಕ್ಕೆ ನಡೆಯಬೇಕಿತ್ತು. 14ಕ್ಕೆ ಮುಂದೂಡಲಾಗಿದ್ದು, ಶುಕ್ರವಾರ ಇದರ ವಿಚಾರಣೆ ನಡೆಯಲಿದೆ’ ಎಂದು ಆರ್.ಶಿವಪ್ಪ ಮಾಹಿತಿ ನೀಡಿದರು.

‘ಪರೀಕ್ಷೆಯ ಸಿದ್ಧತೆ ಈಗಾಗಲೇ ಆರಂಭವಾಗಿದೆ. ಸಿಂಡಿಕೇಟ್ ಸಭೆಯಲ್ಲೂ ಈ ಬಗ್ಗೆ ನಿರ್ಧಾರ ಕೈಗೊಳ್ಳ ಲಾಗಿದೆ. ಮತ್ತೊಮ್ಮೆ ಸಭೆ ನಡೆಸಿ, ಆ.20ರೊಳಗೆ ವೇಳಾಪಟ್ಟಿ ಸಿದ್ಧಪಡಿಸ ಲಾಗುವುದು. ಇದನ್ನು ವಿಶ್ವವಿದ್ಯಾಲಯ ವೆಬ್‌ಸೈಟ್‌ನಲ್ಲೂ ಪ್ರಕಟಿಸ ಲಾಗುವುದು’ ಎಂದು ಹೇಳಿದರು.

‘ಪರೀಕ್ಷೆ ಬರೆಯಲೂ ಅವಕಾಶ’

‘ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಮಾರ್ಗಸೂಚಿಯಂತೆ ಅಂತಿಮ ಸೆಮಿಸ್ಟರ್ ಹೊರತುಪಡಿಸಿ, ಇನ್ನುಳಿದ ಎಲ್ಲ ಪದವಿ, ಸ್ನಾತಕೋತ್ತರ ‍ಪದವಿಯ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗೆ ಬಡ್ತಿ ಕೊಡಲಾಗುವುದು’ ಎಂದು ಕುಲಪತಿ ಹೇಮಂತ್‌ಕುಮಾರ್ ತಿಳಿಸಿದರು.

‘ಪ್ರತಿ ವಿದ್ಯಾರ್ಥಿಯ ಇಂಟರ್ನಲ್‌ ಅಸೆಸ್‌ಮೆಂಟ್‌ ಹಾಗೂ ಹಿಂದಿನ ಸೆಮಿಸ್ಟರ್‌ನಲ್ಲಿ ಆತ ಗಳಿಸಿದ ಅಂಕವನ್ನು ಪರಿಗಣಿಸಿ ಬಡ್ತಿ ಕೊಡಲಾಗುವುದು. ಇದನ್ನು ಇಷ್ಟಪಡದ ವಿದ್ಯಾರ್ಥಿಗೆ, ಮುಂದೆ ಪರೀಕ್ಷೆ ಬರೆಯಲು ಅವಕಾಶ ಕೊಡುವ ಚಿಂತನೆಯನ್ನು ನಡೆಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.