ದೊಡ್ಡಬಳ್ಳಾಪುರ: ಪಟ್ಟಣದಲ್ಲಿ ಬುಧವಾರ 'ಪ್ರಜಾವಾಣಿ' ಅಮೃತ ಮಹೋತ್ಸವದ ಅಂಗವಾಗಿ ಆರ್.ಎಲ್. ಜಾಲಪ್ಪ ಶಿಕ್ಷಣ ಸಂಸ್ಥೆಗಳ ಸಹಯೋಗದಡಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ದಿಕ್ಸೂಚಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.
'ಮನಸ್ಸು ಮರ್ಕಟ ಇದ್ದಂತೆ. ನಿಮ್ಮ ಮನಸ್ಸನ್ನು ನೀವು ಕೇಳಬೇಕು. ಆಗಷ್ಟೇ ಯಶಸ್ಸು ಸಾಧ್ಯ' ಎಂದು ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್ ನ ಕಾರ್ಯ ನಿರ್ವಾಹಕ ನಿರ್ದೇಶಕಿ ಡಾ.ಎಲ್. ಸವಿತಾ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇಡೀ ಜೀವನದಲ್ಲಿ ಬರುವ ಪರೀಕ್ಷೆ ಎದುರಿಸುವುದನ್ನು ಕಲಿಯಬೇಕು. ಈ ಪರೀಕ್ಷೆಯಲ್ಲಿ ಗೆಲುವು ಸಾಧಿಸಲು ನಮ್ಮ ಅನುಭವಗಳನ್ನು ಬಳಸಿಕೊಳ್ಳಬೇಕು. ಇದಕ್ಕೆ ಧನಾತ್ಮಕ ಚಿಂತನೆ ಇದ್ದರೆ ಯಶಸ್ಸು ಸುಲಭ ಎಂದು ಕಿವಿಮಾತು ಹೇಳಿದರು.
ದೈಹಿಕವಾಗಿ ಸದೃಢವಾಗಿದ್ದರೆ ಪರೀಕ್ಷೆ ಎದುರಿಸುವುದು ಸುಲಭ. ಇದಕ್ಕೆ ಪೌಷ್ಟಿಕ ಆಹಾರ ಸೇವಿಸಬೇಕು. ಆಗ ಮನಸ್ಸು ಸಕಾರಾತ್ಮಕವಾಗಿ ಸ್ಪಂದಿಸುತ್ತದೆ. ಕುರುಕಲು ತಿಂಡಿ ಸೇವಿಸುವುದನ್ನು ಕಡಿಮೆ ಮಾಡಬೇಕು. ಮೈದಾದಿಂದ ಮಾಡಿರುವ ಪದಾರ್ಥಗಳನ್ನು ತಿನ್ನಬಾರದು. ಬೇಕರಿ ಪದಾರ್ಥಗಳನ್ಮು ತಿನ್ನಬಾರದು. ಮನೆಯಲ್ಲಿಯೇ ತಯಾರಿಸುವ ಆಹಾರವನ್ನೇ ಸೇವಿಸಬೇಕು ಎಂದು ಸಲಹೆ ನೀಡಿದರು.
ದೊಡ್ಡಬಳ್ಳಾಪುರ ಪಟ್ಟಣದ ವಿವಿಧ ಶಾಲೆಯ 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಐಎಎಸ್ ಅಧಿಕಾರಿ ಕರೀಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಆರ್.ಎಲ್. ಜಾಲಪ್ಪ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ರಾಜೇಂದ್ರ, 'ಪ್ರಜಾವಾಣಿ'ಯ ಕಾರ್ಯ ನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.