ADVERTISEMENT

ಹಸಿರ ನಡುವೆ ಕಂಗೊಳಿಸುವ ಶಾಲೆ

ಕ್ರೀಡೆಗಳಲ್ಲಿ ಗಮನಾರ್ಹ ಸಾಧನೆ l ಶಾಲೆಯ ಆವರಣದಲ್ಲಿವೆ 224ಕ್ಕೂ ಹೆಚ್ಚು ಮರಗಳು

ಅಭಿಷೇಕ ಎನ್.ಪಾಟೀಲ
Published 1 ಜನವರಿ 2020, 19:45 IST
Last Updated 1 ಜನವರಿ 2020, 19:45 IST
ಯಂಕಂಚಿ ಪುನರ್ವಸತಿ ಕೇಂದ್ರದಲ್ಲಿರುವ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಯಂಕಂಚಿ ಪುನರ್ವಸತಿ ಕೇಂದ್ರದಲ್ಲಿರುವ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ   

ಬಾಗಲಕೋಟೆ: ಹಚ್ಚ ಹಸಿರಿನ ಗಿಡ ಮರಗಳ ನಡುವೆ ವಿಶಾಲವಾದ ಪ್ರದೇಶದಲ್ಲಿರುವತಾಲ್ಲೂಕಿನ ಯಂಕಂಚಿ ಪುನರ್ವಸತಿ ಕೇಂದ್ರದ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾರ್ವಜನಿಕರನ್ನು ಆಕರ್ಷಿಸುತ್ತದೆ.

ಎರಡು ಎಕರೆ ವಿಶಾಲವಾದ ಪ್ರದೇಶದಲ್ಲಿ ಬೇವು, ತೆಂಗು, ಕರಿಬೇವು, ಸಾಗವಾನಿ, ವಿವಿಧ ಹೂವಿನ ಗಿಡ ಸೇರಿ 224 ಕ್ಕೂ ಹೆಚ್ಚಿನ ಗಿಡ–ಮರಗಳ ಮಧ್ಯದಲ್ಲಿರುವ ಶಾಲೆಯ ವಾತಾವರಣ ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿ ಮೂಡಿಸುತ್ತಿದೆ.

ಒಂದರಿಂದ ಏಳನೇ ತರಗತಿಯವರೆಗಿರುವ ಶಾಲೆಯಲ್ಲಿ ಒಟ್ಟು 133 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆಯಲ್ಲಿರುವ ಶಿಕ್ಷಕರು ಕ್ರಿಯಾಶೀಲರಾಗಿರುವುದರಿಂದ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಅನೇಕ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ADVERTISEMENT

‘ಹಳೆ ಯಂಕಂಚಿ ಗ್ರಾಮ ಮುಳುಗಡೆಯಾದ ಬಳಿಕ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರವಾದ ನಂತರ ಇಷ್ಟೊಂದು ವಿಶಾಲವಾದ ಜಾಗದಲ್ಲಿ ಪ್ರಾರಂಭವಾದ ಶಾಲೆಯ ವಿದ್ಯಾರ್ಥಿಗಳಿಗೆ ಶಿಕ್ಷಕರ ಕೊರತೆಯಿಲ್ಲ. 7ನೇ ತರಗತಿಯ ಮಕ್ಕಳಿಗೆ ಆರು ಜನ ಶಿಕ್ಷಕರಿದ್ದು, ಅದರಲ್ಲಿ ಒಬ್ಬರು ಅತಿಥಿ ಶಿಕ್ಷಕರಿದ್ದಾರೆ. ಎಲ್ಲ ವಿಷಯಗಳನ್ನು ಬೋಧಿಸುವ ಶಿಕ್ಷಕರಿರುವುದರಿಂದ ಮಕ್ಕಳಿಗೆ ಶೈಕ್ಷಣಿಕವಾಗಿ ಯಾವುದೇ ರೀತಿಯ ತೊಂದರೆಯಾಗುತ್ತಿಲ್ಲ’ ಎನ್ನುತ್ತಾರೆಶಾಲೆಯ ಮುಖ್ಯಶಿಕ್ಷಕ ಎಸ್.ಪಿ.ಕೆಂಗನಾಳ.

‘ವಿದ್ಯಾರ್ಥಿಗಳಿಗೆ ಬೇಕಿರುವ ಕುಡಿಯುವ ನೀರು, ಶೌಚಾಲಯ ಸೇರಿ ಎಲ್ಲ ರೀತಿಯ ಅನುಕೂಲವನ್ನು ಎಸ್‌ಡಿಎಂಸಿ ಅಧ್ಯಕ್ಷರು ಮಾಡಿಸಿದ್ದಾರೆ. ಶಾಲೆಯ ವಿಶಾಲವಾದ ಕ್ರೀಡಾಂಗಣದಲ್ಲಿ
ತರಬೇತಿ ಪಡೆದ ವಿದ್ಯಾರ್ಥಿನಿಯರು ಇತ್ತೀಚೆಗೆ ನಡೆದ ತಾಲ್ಲೂಕು ಮಟ್ಟದ 100 ಮೀಟರ್ ಓಟದಲ್ಲಿ ದ್ವಿತೀಯ, ಎತ್ತರ ಜಿಗಿತದಲ್ಲಿ ತೃತೀಯ ಹಾಗೂ 100X4 ಮೀ ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ’ ಎಂದು ತಿಳಿಸಿದರು.

‘ಮಕ್ಕಳಿಗೆ ಸಾಮಾನ್ಯ ಜ್ಞಾನದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿದಿನ ಪ್ರಾರ್ಥನೆಯ ಸಮಯದಲ್ಲಿ ರಸಪ್ರಶ್ನೆ ಕೇಳಲಾಗುತ್ತದೆ.ವಿದ್ಯಾರ್ಥಿಗಳಲ್ಲಿ ಬರವಣಿಗೆಯಲ್ಲಿ ಆಸಕ್ತಿ ಮೂಡಿಸುವ ಉದ್ದೇಶದಿಂದ ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತದೆ.ಶಾಲೆಯಲ್ಲಿ ಬೆಳೆದಿರುವ ಗಿಡ, ಮರಗಳಿಂದಾಗುವ ಪ್ರಯೋಜನಗಳ ಬಗ್ಗೆ ನಿರಂತರವಾಗಿ ಅರಿವು ಮೂಡಿಸುವ ಜೊತೆಗೆ ವಿದ್ಯಾರ್ಥಿಗಳು ದೈಹಿಕವಾಗಿ ಸದೃಢರಾಗಬೇಕು ಎನ್ನುವ ಹಿನ್ನೆಲೆಯಲ್ಲಿ ವಾರದಲ್ಲಿ ಒಂದು ದಿನ ನೆನೆಸಿದ ಕಾಳುಗಳನ್ನು ನೀಡಲಾಗುತ್ತದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.