ADVERTISEMENT

ಮಗಳ ಪ್ರೇರಣೆ; ಅಂಗನವಾಡಿಗೆ ಭೂ ದಾನ! ನವಲಿಹಾಳದಲ್ಲಿ ಮಾದರಿ ಕುಟುಂಬ

ಸುಧಾಕರ ಎಸ್.ತಳವಾರ, ಬೆಂಗಳೂರು
Published 12 ಫೆಬ್ರುವರಿ 2019, 19:45 IST
Last Updated 12 ಫೆಬ್ರುವರಿ 2019, 19:45 IST
ಚಿಕ್ಕೋಡಿ ತಾಲ್ಲೂಕು ನವಲಿಹಾಳದಲ್ಲಿ ನಿರ್ಮಾಣಗೊಂಡಿರುವ ಅಂಗನವಾಡಿ ಕಟ್ಟಡ
ಚಿಕ್ಕೋಡಿ ತಾಲ್ಲೂಕು ನವಲಿಹಾಳದಲ್ಲಿ ನಿರ್ಮಾಣಗೊಂಡಿರುವ ಅಂಗನವಾಡಿ ಕಟ್ಟಡ   

ಚಿಕ್ಕೋಡಿ: ಬಡ ಕುಟುಂಬವೊಂದು, ಮಗಳ ಪ್ರೇರಣೆಯಿಂದಾಗಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ತಮ್ಮ ಸ್ವಂತ ಜಾಗವನ್ನು ಉದಾರವಾಗಿ ನೀಡಿ ಗಮನಸೆಳೆದಿದೆ.

ತಾಲ್ಲೂಕಿನ ನವಲಿಹಾಳದ ಆನಂದ ಕೃಷ್ಣ ಹೆಗಡೆ ಎಂಬುವವರೇ ಆ ಭೂ ದಾನಿ.

ಕೂಲಿ–ನಾಲಿ ಮಾಡಿ ಕುಟುಂಬ ನಿರ್ವಹಣೆ ಮಾಡುವ ಆನಂದ ಹೆಗಡೆ ಅವರ ಮನೆ ಶಿರಗಾಂವ–ನವಲಿಹಾಳ ರಸ್ತೆಗೆ ಹೊಂದಿಕೊಂಡಿದೆ. ಮನೆಯ ಎಡಬದಿಯಲ್ಲಿ ಸ್ವಲ್ಪ ಜಾಗ ಖಾಲಿ ಇತ್ತು. ಅದೇ ಪ್ರದೇಶದಲ್ಲಿ ಸರ್ಕಾರದಿಂದ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಅನುದಾನವೂ ಮಂಜೂರಾಯಿತು. ಆದರೆ, ಜಾಗದ ಸಮಸ್ಯೆ ಎದುರಾಯಿತು. ಆಗ ಆನಂದ ಹೆಗಡೆ ತಮ್ಮ ಸ್ವಲ್ಪ ಜಾಗವನ್ನು ಉಚಿತವಾಗಿ ಕೊಟ್ಟಿದ್ದಾರೆ. ಕಟ್ಟಡ ಈಗ ನಿರ್ಮಾಣಗೊಂಡು ಉದ್ಘಾಟನೆಗೆ ಸಜ್ಜಾಗಿದೆ.

ADVERTISEMENT

ವಿಶೇಷವೆಂದರೆ ಈ ಜಾಗ ದಾನ ಮಾಡಲು ಅವರ ಪುತ್ರಿ ಕಾಜಲ್ ಕಾರಣ. ಚಿಕ್ಕೋಡಿಯಲ್ಲಿ ಪದವಿ ಓದುತ್ತಿರುವ ಅವರು, ತಮ್ಮ ಮನೆ ಪರಿಸರದಲ್ಲಿ ಮಂಜೂರಾಗಿರುವ ಅಂಗನವಾಡಿ ಕಟ್ಟಡ ಜಾಗದ ಕೊರತೆಯಿಂದ ಬೇರೆಡೆ ಸ್ಥಳಾಂತರವಾಗಬಾರದು. ನಮ್ಮ ಪರಿಸರದ ಮಕ್ಕಳು ಅಂಗನವಾಡಿ ಸೌಲಭ್ಯ ಪಡೆಯಲು ಇಲ್ಲೇ ಕಟ್ಟಡ ನಿರ್ಮಾಣವಾಗಬೇಕು ಎಂದು, ಜಾಗ ಕೊಡಲು ಕುಟುಂಬದವರ ಮನವೊಲಿಸಿದ್ದಾರೆ.

‘ರಸ್ತೆ ಪಕ್ಕ ನಮಗೆ ಸೇರಿದ ಸ್ವಲ್ಪ ಖಾಲಿ ಜಾಗ ಇತ್ತು. ಅದರ ಪಕ್ಕದಲ್ಲಿ ಸಮುದಾಯ ಮಂದಿರ ಇತ್ತು. ಆದರೆ, ಸಮುದಾಯ ಮಂದಿರದ ವಿಸ್ತೀರ್ಣದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಆಗುತ್ತಿರಲಿಲ್ಲ. ನಮ್ಮ ಪರಿಸರದ ಮಕ್ಕಳೇ ಇಲ್ಲಿ ಶಿಕ್ಷಣ ಪಡೆಯುತ್ತಾರೆ ಎಂಬ ಉದ್ದೇಶದಿಂದ ನಮ್ಮ ಬಳಿ ಇದ್ದ ಸ್ವಲ್ಪ ಜಾಗವನ್ನೂ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ನೀಡಿದ್ದೇವೆ’ ಎಂದು ಆನಂದ ತಿಳಿಸಿದರು.

ಈ ಅಂಗನವಾಡಿಯನ್ನು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲಾ ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿಯಿಂದ ನಿರ್ಮಿಸಲಾಗಿದೆ. ಗೋಡೆ ಮೇಲೆ ಅಂಕಿ, ಎಬಿಸಿಡಿ ಹಾಗೂ ಕನ್ನಡ ವರ್ಣಮಾಲೆ ಬರೆಯಲಾಗಿದೆ. ಮಕ್ಕಳು ಹಾಗೂ ಪ್ರಾಣಿಗಳ ಆಕರ್ಷಕ ಚಿತ್ರಗಳನ್ನು ಬಿಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.