ADVERTISEMENT

ಜಾಣ್ಮೆ–ಕಾತರ; ಕ್ಷಣಾರ್ಧದಲ್ಲಿ ಉತ್ತರ

ಪ್ರಜಾವಾಣಿ– ಡೆಕ್ಕನ್ ಹೆರಾಲ್ಡ್ ಕ್ವಿಜ್‌ ಚಾಂಪಿಯನ್‌ಶಿಪ್‌: ಕೂರ್ಗ್‌ ಪಬ್ಲಿಕ್‌ ಶಾಲೆಗೆ ಮೊದಲ ಎರಡು ಸ್ಥಾನ

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 20:00 IST
Last Updated 17 ಜನವರಿ 2020, 20:00 IST
ಮೊದಲ ಸ್ಥಾನ ಪಡೆದು ಫೈನಲ್‌ ಪ್ರವೇಶಿಸಿದ ಗೋಣಿಕೊಪ್ಪಲು ಕೂರ್ಗ್‌ ಪಬ್ಲಿಕ್‌ ಶಾಲೆಯ ದೀಪಕ್‌ರಾಜ್‌ ಹಾಗೂ ಅಮೋಘವರ್ಷ ಅವರಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ. ಪನ್ನೇಕರ್‌ ಅವರು ಟ್ರೋಫಿ ವಿತರಿಸಿದರು. ಡಿಡಿಪಿಐ ಪೆರಿಗ್ರಿನ್‌ ಎಸ್. ಮಚ್ಚಾದೊ ಹಾಗೂ ಕ್ವಿಜ್‌ ಮಾಸ್ಟರ್‌ ಸಚ್ಚಿನ್‌ ದೇಶಪಾಂಡೆ ಇದ್ದಾರೆ     –ಪ್ರಜಾವಾಣಿ ಚಿತ್ರ
ಮೊದಲ ಸ್ಥಾನ ಪಡೆದು ಫೈನಲ್‌ ಪ್ರವೇಶಿಸಿದ ಗೋಣಿಕೊಪ್ಪಲು ಕೂರ್ಗ್‌ ಪಬ್ಲಿಕ್‌ ಶಾಲೆಯ ದೀಪಕ್‌ರಾಜ್‌ ಹಾಗೂ ಅಮೋಘವರ್ಷ ಅವರಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ. ಪನ್ನೇಕರ್‌ ಅವರು ಟ್ರೋಫಿ ವಿತರಿಸಿದರು. ಡಿಡಿಪಿಐ ಪೆರಿಗ್ರಿನ್‌ ಎಸ್. ಮಚ್ಚಾದೊ ಹಾಗೂ ಕ್ವಿಜ್‌ ಮಾಸ್ಟರ್‌ ಸಚ್ಚಿನ್‌ ದೇಶಪಾಂಡೆ ಇದ್ದಾರೆ     –ಪ್ರಜಾವಾಣಿ ಚಿತ್ರ   

ಮಡಿಕೇರಿ: ಜಾಣ್ಮೆ, ಕ್ಷಣಾರ್ಧದಲ್ಲಿ ಉತ್ತರಿಸುವ ಪರಿ, ಆಲೋಚನಾ ಸಾಮರ್ಥ್ಯ, ಕಾತರ, ತಳಮಳ, ಕುತೂಹಲ... ಅಲ್ಲಿ ಸೇರಿದ್ದ ವಿದ್ಯಾರ್ಥಿಗಳಲ್ಲಿ ಎಲ್ಲವೂ ಒಮ್ಮೆಲೇ ಕಂಡುಬಂದವು. ಅದಕ್ಕೆ ವೇದಿಕೆ ಕಲ್ಪಿಸಿದ್ದು ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ವತಿಯಿಂದ ದೀಕ್ಷಾ ಸಂಸ್ಥೆಯ ಸಹಯೋಗದಲ್ಲಿ ನಡೆದ ‘ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಶಿಪ್‌’.

ನಗರದ ಮೈತ್ರಿ ಪೊಲೀಸ್‌ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಕೊಡಗು ಮಟ್ಟದ ಕ್ವಿಜ್‌ಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು. ಗೆದ್ದವರು ಸಂಭ್ರಮಿಸಿದರು. ಹಿನ್ನಡೆ ಅನುಭವಿಸಿದವರು ಒಂದೆರಡು ಪ್ರಶ್ನೆಗಳಿಗೆ ಸರಿಯುತ್ತರ ನೀಡಿದ್ದರೆ ಪ್ರಶಸ್ತಿ ನಮ್ಮ ಪಾಲಾಗುತ್ತಿತ್ತು ಎಂದು ಹೇಳಿದರು.

ಬೆಳಿಗ್ಗೆ 8.30ರ ವೇಳೆಗೆ ನೋಂದಣಿ ಆರಂಭವಾಯಿತು. ಬೆಳಿಗ್ಗೆ 10ರ ಸುಮಾರಿಗೆ ಪ್ರಾಥಮಿಕ ಸುತ್ತು ಆರಂಭವಾಯಿತು.20 ಪ್ರಶ್ನೆಗಳು ಪರದೆಯ ಮೇಲೆ ಮೂಡಿದವು. ಕ್ವಿಜ್‌ ಮಾಸ್ಟರ್‌ ಸಚ್ಚಿನ್‌ ದೇಶಪಾಂಡೆ ಅವರು, ಒಂದೊಂದೇ ಪ್ರಶ್ನೆಗಳನ್ನು ಕೇಳುತ್ತಿದ್ದಂತೆಯೇ ವಿದ್ಯಾರ್ಥಿಗಳು ಯೋಚಿಸಿ ಉತ್ತರಿಸಲು ಆರಂಭಿಸಿದರು. ಉತ್ತರ ಗೊತ್ತಿದ್ದ ವಿದ್ಯಾರ್ಥಿಗಳು ನಗುಮೊಗದಿಂದ ಉತ್ತರಿಸಿದರು. ಉಳಿದವರು ಕಾಲಾವಕಾಶ ತೆಗೆದುಕೊಂಡು ತಾಳ್ಮೆಯಿಂದ ಉತ್ತರ ಬರೆದರು. ಬಳಿಕ ಮೌಲ್ಯಮಾಪನ ನಡೆದು, ಆರು ತಂಡಗಳು ಪ್ರಧಾನ
ಸುತ್ತಿಗೆ ಆಯ್ಕೆಯಾದವು.

ADVERTISEMENT

ಪ್ರಧಾನ ಹಂತದಲ್ಲಿ ಐದು ಸುತ್ತಿನಲ್ಲಿ ಪ್ರಶ್ನೆಗಳಿದ್ದವು. ಪ್ರಶ್ನೋತ್ತರ ಸುತ್ತು, ಸರಿ– ತಪ್ಪು ಪ್ರಶ್ನೆಗಳು, ಚಿತ್ರ ಸಂಪರ್ಕ, ಧ್ವನಿ ಮತ್ತು ದೃಶ್ಯ ಹಾಗೂ ರ್‍ಯಾಪಿಡ್‌ ಸುತ್ತು.

ಆರಂಭದಿಂದಲೂ ಕೆಲವು ತಂಡಗಳು ಮೇಲುಗೈ ಸಾಧಿಸಿದವು. ಪರದೆಯ ಮೇಲೆ ಪ್ರಶ್ನೆಗಳು ಮೂಡುತ್ತಿದ್ದಂತೆಯೇ ಕೆಲವು ತಂಡಗಳು ಸರಿ ಉತ್ತರ ನೀಡಿ, ಸಭಿಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡವು. ಅದೇ ರೀತಿ ತಪ್ಪು ಉತ್ತರ ನೀಡಿ ಅಂಕ ಕಳೆದುಕೊಂಡ ತಂಡದಲ್ಲಿ ನಿರಾಸೆ. ಸ್ಥಳೀಯ ಹುತ್ತರಿ ಹಬ್ಬ ಸೇರಿದಂತೆ ಕೊಡಗಿಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳನ್ನು ಕೇಳಲಾಯಿತು. ಅದಕ್ಕೆ ಸರಿಯುತ್ತರ ನೀಡಿದವರು ಹಿಗ್ಗಿದರು.

ಪ್ರಧಾನ ಸುತ್ತಿಗೆ ತಲುಪಿದ ತಂಡಗಳಲ್ಲಿ ವಲಯಮಟ್ಟದಲ್ಲಿ ಗೆದ್ದು ಬೆಂಗಳೂರಿನಲ್ಲಿ ನಡೆಯುವ ಗ್ರ್ಯಾಂಡ್‌ ಫಿನಾಲೆಗೆ ಹೋಗಬೇಕು ಎಂಬ ಬಯಕೆಯಿತ್ತು. ಅದರಂತೆಯೇ ಉತ್ತರವನ್ನೂ ನೀಡುತ್ತಿದ್ದರು. ಆರು ತಂಡಗಳು ಉತ್ತರಿಸಲು ಆಗದಿದ್ದಾಗ, ಉತ್ತರ ಹೇಳುವ ಸರದಿ ಪ್ರೇಕ್ಷಕರದ್ದು. ಸರಿಯುತ್ತರ ನೀಡಿದ ಪ್ರೇಕ್ಷಕರಿಗೆ ಸ್ಥಳದಲ್ಲೇ ಸೂಕ್ತ ಬಹುಮಾನ ನೀಡಲಾಯಿತು. ಪ್ರೇಕ್ಷಕರ ಸರದಿ ಬಂದಾಗ ನಾಮುಂದು– ತಾಮುಂದು ಎಂದು ಕೈಯೆತ್ತುವ ದೃಶ್ಯವೂ ಕಂಡುಬಂತು.

ಕೆಲವು ಕಠಿಣ ಪ್ರಶ್ನೆಗಳಿಗೆ ಉತ್ತರ ನೀಡದಿದ್ದಾಗ ಕ್ವಿಜ್‌ ಮಾಸ್ಟರ್‌ ಸುಳಿವು ನೀಡುತ್ತಿದ್ದರು. ಆಗ ಪ್ರೇಕ್ಷಕರೂ ಥಟ್‌ ಎಂದು ಉತ್ತರ ನೀಡಿ ಬಹುಮಾನ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.