ವಿ.ವಿಕಾಸ್
ಶಿವಮೊಗ್ಗ: ಸಾಗರದ ಕಾಗೋಡು ತಿಮ್ಮಪ್ಪ ನಗರದ ಅಣಲೆಕೊಪ್ಪ ಬಡಾವಣೆ ನಿವಾಸಿ, ಅಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ವಿಜಯೇಂದ್ರ ಸಿ.ಪಾಟೀಲ ಹಾಗೂ ಶಿಕ್ಷಕಿ ಮಹಾಲಕ್ಷ್ಮಿ ಹೆಗಡೆ ದಂಪತಿ ಪುತ್ರ ವಿ. ವಿಕಾಸ್ ಮಂಗಳವಾರ ಪ್ರಕಟವಾದ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ಸಿ) ಪರೀಕ್ಷೆಯಲ್ಲಿ 288ನೇ ರ್ಯಾಂಕ್ ಪಡೆದಿದ್ದಾರೆ.
ಐಐಟಿ ರೂರ್ಕಿಯಲ್ಲಿ ಇ ಅಂಡ್ ಇಯಲ್ಲಿ ಎಂಟೆಕ್ ಪದವೀಧರ ವಿಕಾಸ್, ಹೊಸನಗರದ ಹೋಲಿರೆಡಿಮರ್ ಹಾಗೂ ಕುವೆಂಪು ಶಾಲೆ, ಸಾಗರದ ಸೆಂಟ್ ಜೋಸೆಫ್, ಹೊಂಗಿರಣ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಎಂಜಿಎನ್ ಪೈ ಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದಿದ್ದಾರೆ. ಶಿವಮೊಗ್ಗದ ಪೇಸ್ ಕಾಲೇಜು ಹಾಗೂ ಸಾಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಹಾಗೂ ಮೈಸೂರಿನ ಎನ್ಐಇಯಲ್ಲಿ ಇ ಅಂಡ್ ಇ ವಿಷಯದಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
27 ವರ್ಷದ ವಿಕಾಸ್ ಮೊದಲ ಪ್ರಯತ್ನದಲ್ಲಿಯೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಯಶಸ್ಸು ಪಡೆದಿದ್ದಾರೆ. ಸಂದರ್ಶನದ ತರಬೇತಿಗೆಂದು ದೆಹಲಿಗೆ ತೆರಳಿದ್ದ ಅವರು ಸದ್ಯ ಅಲ್ಲಿಯೇ ಇದ್ದಾರೆ ಎಂದು ತಿಳಿದುಬಂದಿದೆ.
ವಿಕಾಸ್ ಓದಿದ ಎಲ್ಲ ಶಾಲೆಗಳ ಗುರುಗಳ ಆಶೀರ್ವಾದ ಹಾಗೂ ಏನಾದರೂ ಮಹತ್ವವಾದದ್ದನ್ನು ಸಾಧಿಸಬೇಕು ಅನ್ನೋ ಅವನ ಛಲ ಈ ಸಾಧನೆಗೆ ಪ್ರೇರಣೆಯಾಗಿದೆ ಎಂದು ಅಪ್ಪ ವಿಜಯೇಂದ್ರ ಸಿ.ಪಾಟೀಲ ಹರ್ಷ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.