ADVERTISEMENT

ಮಂಡ್ಯ: ಅಭಿಮಾನ–ಅನುಕಂಪ ಬಿಡಿ; ಅನುದಾನ ನೋಡಿ ಮತ ಕೊಡಿ: ಮರಿತಿಬ್ಬೇಗೌಡ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 13:28 IST
Last Updated 2 ಏಪ್ರಿಲ್ 2019, 13:28 IST
ಮಳವಳ್ಳಿ ತಾಲ್ಲೂಕು ಮುದ್ದೇಗೌಡನದೊಡ್ಡಿ ಗ್ರಾಮದಲ್ಲಿ ಮಂಗಳವಾರ ನಿಖಿಲ್‌ ಕುಮಾರಸ್ವಾಮಿ ಅರಳಿಕಟ್ಟೆ ಮೇಲೆ ಕುಳಿತು ಸಮಸ್ಯೆ ಆಲಿಸಿದರು
ಮಳವಳ್ಳಿ ತಾಲ್ಲೂಕು ಮುದ್ದೇಗೌಡನದೊಡ್ಡಿ ಗ್ರಾಮದಲ್ಲಿ ಮಂಗಳವಾರ ನಿಖಿಲ್‌ ಕುಮಾರಸ್ವಾಮಿ ಅರಳಿಕಟ್ಟೆ ಮೇಲೆ ಕುಳಿತು ಸಮಸ್ಯೆ ಆಲಿಸಿದರು   

ಮಂಡ್ಯ: ‘ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕ್ಷೇತ್ರಕ್ಕೆ ₹ 8 ಸಾವಿರ ಕೋಟಿ ಅನುದಾನ ಕೊಟ್ಟಿದ್ದಾರೆ. ಅಭಿಮಾನ, ಅನುಕಂಪ ಬಿಟ್ಟು ಅನುದಾನವನ್ನು ನೋಡಿ ನಿಖಿಲ್‌ ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಮನವಿ ಮಾಡಿದರು.

ಮಳವಳ್ಳಿ ತಾಲ್ಲೂಕು, ಹಿಟ್ಟನಹಳ್ಳಿಕೊಪ್ಪಲು ಗ್ರಾಮದಲ್ಲಿ ಮಂಗಳವಾರ ನಿಖಿಲ್‌ ಕುಮಾರಸ್ವಾಮಿ ಪರ ಪ್ರಚಾರ ಮಾಡಿದ ಅವರು ‘ಅನುದಾನದಿಂದ ಜಿಲ್ಲೆ ಅಭಿವೃದ್ಧಿಯಾಗುತ್ತದೆ. ಅಭಿಮಾನ– ಅನುಕಂಪದಿಂದ ಅಭಿವೃದ್ಧಿ ಅಸಾಧ್ಯ’ ಎಂದು ಹೇಳಿದರು.

ಕಾಂಗ್ರೆಸ್‌ ಅಸಹಕಾರ

ADVERTISEMENT

‘ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ಸೇರಿ ಕಳೆದ ಚುನಾವಣೆಯಲ್ಲಿ ಸೋಲು ಕಂಡ ಕಾಂಗ್ರೆಸ್‌ ಮುಖಂಡರು ನಿಖಿಲ್‌ ಪರ ಕೆಲಸ ಮಾಡುತ್ತಿಲ್ಲ. ಈ ಕುರಿತು ಕಾಂಗ್ರೆಸ್‌ ಮುಖಂಡರ ಗಮನಕ್ಕೆ ತಂದಿದ್ದೇವೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಹಾಗೂ ಸಿದ್ದರಾಮಯ್ಯ ಗುದ್ದಾಡಿದ್ದೇವೆ. ಆದರೆ ಅದನ್ನೆಲ್ಲಾ ಮರೆತು ಮೈಸೂರಿನಲ್ಲಿ ಕಾಂಗ್ರೆಸ್‌ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ’ ಎಂದರು.

ಪ್ರಶ್ನಿಸುತ್ತಿರುವ ಮಹಿಳೆಯರು

ಜೆಡಿಎಸ್‌ ಪ್ರಚಾರದ ವೇಳೆ ಹಲವು ಹಳ್ಳಿಗಳಲ್ಲಿ ಮಹಿಳೆಯರು ನಿಖಿಲ್‌ ಕುಮಾರಸ್ವಾಮಿ ಅವರನ್ನು ಪ್ರಶ್ನಿಸುತ್ತಿದ್ದಾರೆ. ಮಂಗಳವಾರ ಹಿಟ್ಟನಹಳ್ಳಿಕೊಪ್ಪಲು ಗ್ರಾಮದಲ್ಲಿ ಮಹಿಳೆಯೊಬ್ಬರು ‘ನಿಮ್ಮ ತಂದೆ ಕುಮಾರಸ್ವಾಮಿ ಮಹಿಳಾ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಭರವಸೆ ಕೊಟ್ಟಿದ್ದರು. ಆದರೆ ಗೆದ್ದು ಮುಖ್ಯಮಂತ್ರಿಯಾದ ನಂತರ ಕೊಟ್ಟ ಮಾತು ಉಳಿಸಿಕೊಂಡಿಲ್ಲ’ ಎಂದು ಆರೋಪಿಸಿದರು. ಆರೋಪಗಳನ್ನು ತಾಳ್ಮೆಯಿಂದ ಕೇಳಿಸಿಕೊಂಡ ನಿಖಿಲ್‌, ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.

ಮುದ್ದೇಗೌಡನದೊಡ್ಡಿ ಗ್ರಾಮದಲ್ಲಿ ವಿದ್ಯುತ್‌ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ ಎಂದು ದೂರಿದರು. ಗ್ರಾಮದ ಅರಳಿಕಟ್ಟೆಯ ಮೇಲೆ ಕುಳಿತು ಗ್ರಾಮಸ್ಥರ ಸಮಸ್ಯೆ ಆಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.