ADVERTISEMENT

ಡಿಕೆಶಿಗೆ ಕಾಂಗ್ರೆಸ್ ಹೆಣ ಹೊರುವ ಕೆಲಸ ಕಾಯಂ: ಜಗದೀಶ ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2019, 12:15 IST
Last Updated 25 ಮಾರ್ಚ್ 2019, 12:15 IST
   

ಹೂವಿನಹಡಗಲಿ: ‘ಲೋಕಸಭೆ ಚುನಾವಣೆ ಬಳಿಕ ಡಿ.ಕೆ.ಶಿವಕುಮಾರ್ ಅವರಿಗೆ ಕಾಂಗ್ರೆಸ್ ಪಕ್ಷದ ಹೆಣ ಹೊರುವ ಕೆಲಸ ಕಾಯಂ ಆಗಲಿದೆ’ ಎಂದು ಶಾಸಕ ಜಗದೀಶ ಶೆಟ್ಟರ್ ಲೇವಡಿ ಮಾಡಿದರು.

ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷದಲ್ಲಿ ಪಲ್ಲಕ್ಕಿ ಹೊರುವವನು ನಾನೇ, ಹೆಣ ಹೊರುವವನೂ ನಾನೇ ಎಂದು ಡಿಕೆಶಿ ಅಹಂನಿಂದ ಹೇಳಿಕೊಂಡಿದ್ದಾರೆ. ಪಲ್ಲಕ್ಕಿ ಹೊರುವ ಕಾಲ ಮುಗೀತು, ಇನ್ನೇನಿದ್ರು ಹೆಣ ಹೊರುವ ಜವಾಬ್ದಾರಿ ಅವರದಾಗಲಿದೆ’ ಎಂದರು.

‘ಡಿ.ಕೆ.ಶಿವಕುಮಾರ್ ತನ್ನ ಹಗರಣಗಳ ದಿಕ್ಕು ತಪ್ಪಿಸಲು ಯಡಿಯೂರಪ್ಪ ಡೈರಿ ಸಿಕ್ಕಿದೆ ಎಂದು ಹೊಸ ಆಟ ಶುರು ಮಾಡಿಕೊಂಡಿದ್ದಾರೆ. ಆದಾಯ ತೆರಿಗೆ ಇಲಾಖೆಯೇ ಇದು ಬೋಗಸ್‌ ಎಂದು ಹೇಳಿದೆ. ಮೋದಿ ಪರ ಅಲೆ ಇರುವುದನ್ನು ಸಹಿಸಲಾಗದೇ ಕಾಂಗ್ರೆಸ್ ಪಕ್ಷ ಈ ರೀತಿ ಸುಳ್ಳು ಹರಡಲು ಯತ್ನಿಸುತ್ತಿದೆ. ಈ ಚುನಾವಣೆಯಿಂದಲೇ ಕಾಂಗ್ರೆಸ್ ಅಂತ್ಯಕಾಲ ಆರಂಭ ಎಂಬುದನ್ನು ಶಿವಕುಮಾರ್ ತಮ್ಮ ಡೈರಿಯಲ್ಲಿ ಬರೆದಿಟ್ಟುಕೊಳ್ಳಲಿ’ ಎಂದು ಹೇಳಿದರು.

ADVERTISEMENT

‘ರಾಜ್ಯದ ಸಮ್ಮಿಶ್ರ ಸರ್ಕಾರದ ಬಗ್ಗೆ ಜನರಿಗೆ ನಂಬಿಕೆ ಇಲ್ಲವಾಗಿದೆ. ಈ ಸರ್ಕಾರ ಹಿರಿಯರು ಒತ್ತಾಯಪೂರ್ವಕ ಮಾಡಿದ ಮದುವೆಯಂತಿದೆ. ಒಲ್ಲದ ಮನಸ್ಸಿನಿಂದ ಗಂಡ ಹೆಂಡತಿ ಆದವರು ಪ್ರತಿದಿನ ಜಗಳವಾಡುತ್ತಿದ್ದಾರೆ. ಒಬ್ಬರನ್ನು ಒಬ್ಬರು ಸೋಲಿಸಲು ಅವರಲ್ಲೇ ಪೈಪೋಟಿ ನಡೆದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.