ADVERTISEMENT

ಕ್ಷೇತ್ರ ಮಹಾತ್ಮೆ: ಅರುಣಾಚಲ ಪಶ್ಚಿಮ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2024, 20:58 IST
Last Updated 24 ಮಾರ್ಚ್ 2024, 20:58 IST
arunachala west
arunachala west   

ಅರುಣಾಚಲ ಪಶ್ಚಿಮ ಲೋಕಸಭಾ ಕ್ಷೇತ್ರವು ಈ ಬಾರಿಯೂ ಕದನ ಕಲಿಗಳ ಹೋರಾಟಕ್ಕೆ ಅಣಿಯಾಗಿದೆ. ಕೇಂದ್ರ ಸಚಿವ ಕಿರಣ್‌ ರಿಜಿಜು ಅವರನ್ನು ಬಿಜೆಪಿಯು ಕಣಕ್ಕಿಳಿಸಿದರೆ, ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ನಬಂ ತುಕಿ ಅವರನ್ನು ಕಾಂಗ್ರೆಸ್ ಅಖಾಡಕ್ಕಿಳಿಸಿದೆ. ನಬಂ ಅವರು ಕಳೆದ ಚುನಾವಣೆಯಲ್ಲಿ ಕಿರಣ್‌ ವಿರುದ್ಧ ಸೆಣಸಿ ಎರಡನೇ ಸ್ಥಾನಕ್ಕೆ ಸೀಮಿತರಾಗಿದ್ದರು. ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮುಖ್ಯಸ್ಥರಾಗಿರುವ ಜೆಡಿಯು ಈ ಬಾರಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರುಹಿ ತಗುಂಗ್‌ ಅವರನ್ನು ಸ್ಪರ್ಧೆಗಿಳಿಸಿ ಚುನಾವಣಾ ಕಣವನ್ನು ಇನ್ನಷ್ಟು ರಂಗೇರಿಸಿದೆ. ಈ ಬಾರಿಯ ಸ್ಪರ್ಧೆಯು ಕಿರಣ್‌ ಮತ್ತು ನಬಂ ನಡುವಣ ನೇರ ಹಣಾಹಣಿಗೆ ವೇದಿಕೆಯಾಗಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಚುನಾವಣೆಯಲ್ಲಿ ಕಿರಣ್‌ ಅವರು ನಬಂ ವಿರುದ್ಧ ಭಾರಿ ಅಂತರದಿಂದ ಗೆದ್ದಿದ್ದರು. ಈಶಾನ್ಯ ರಾಜ್ಯ ಮಣಿಪುರದಲ್ಲಿನ ಗಲಭೆ ಸೇರಿದಂತೆ ವಿವಿಧ ವಿಚಾರಗಳು ಈ ಕ್ಷೇತ್ರದಲ್ಲಿ ತಮಗೆ ಅನುಕೂಲಕರ ವಾತಾವರಣ ಸೃಷ್ಟಿಸಲಿದೆ ಎಂಬುದು ಕಾಂಗ್ರೆಸ್‌ ನಿರೀಕ್ಷೆಯಾಗಿದೆ. ಕ್ಷೇತ್ರದ ಇತಿಹಾಸವನ್ನು ಗಮನಿಸಿದರೆ ಇದು ಬಿಜೆಪಿಯ ಭದ್ರಕೋಟೆ ಎನ್ನಬಹುದಾಗಿದೆ. 2004, 2014, 2019ರಲ್ಲಿ ಕಿರಣ್‌ ಅವರು ಇಲ್ಲಿಂದ ಲೋಕಸಭೆಗೆ ಆಯ್ಕೆಯಾಗಿರುವುದರಿಂದ ಬಿಜೆಪಿಯು ಇದನ್ನು ಗೆಲ್ಲುವ ಕ್ಷೇತ್ರವೆಂದೇ ಪರಿಗಣಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.