ವಿಜಯಪುರ: ‘ಮಹಿಳೆಯರ ರಕ್ಷಣೆ ಹಾಗೂ ಅವರ ಏಳಿಗೆಗಾಗಿ ವಿಶೇಷ ಯೋಜನೆಗಳನ್ನು ರೂಪಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಮಹಿಳೆಯರು ಅಭ್ಯರ್ಥಿ ಬಿ.ಎನ್. ಬಚ್ಚೇಗೌಡ ಅವರಿಗೆ ಮತ ನೀಡಬೇಕು’ ಎಂದು ಬಿಜೆಪಿ ಮಹಿಳಾ ಮೋರ್ಚಾ ತಾಲ್ಲೂಕು ಘಟಕದ ಅಧ್ಯಕ್ಷೆ ಬೂದಿಗೆರೆ ನಾಗವೇಣಿ ಹೇಳಿದರು.
ಅಭ್ಯರ್ಥಿ ಪರ ಇಲ್ಲಿ ಮತಯಾಚನೆ ಮಾಡಿದ ಅವರು, ಬೇಟಿ ಬಚಾವೋ..ಬೇಟಿ ಪಡಾವೋ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಪ್ರತಿಯೊಬ್ಬ ಹೆಣ್ಣು ಮಗಳು, ಕಟ್ಟಿಗೆಯಿಂದ ಅಡುಗೆ ತಯಾರಿಸುವಾಗ ಹೊಗೆಯಿಂದ ಆರೋಗ್ಯಕ್ಕೆ ಹಾನಿಯಾಗಬಾರದೆಂದು ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕಗಳನ್ನು ನೀಡಿದ್ದಾರೆ. ಇದರ ಜೊತೆಗೆ ಅನೇಕ ಜನಪರವಾದ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದರು.
ನಗರ ಘಟಕದ ಅಧ್ಯಕ್ಷ ರಜನಿ ಕನಕರಾಜು ಮಾತನಾಡಿ, ಪುರುಷರಿಗಿಂತ ಮಹಿಳೆಯರೇ ಪ್ರಧಾನಿ ಅವರ ಕಾರ್ಯಕ್ರಮಗಳು ಮತ್ತು ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ. ಅವರು ಕೈಗೊಂಡಿರುವ ಜನಪರ ಕಾರ್ಯಕ್ರಮ ಇಂದು ಸಾಮಾನ್ಯರ ಕುಟುಂಬಗಳಿಗೂ ತಲುಪುತ್ತಿವೆ ಎಂದರು.
ಸಣ್ಣ ಮಕ್ಕಳೂ ಮೋದಿ ಅವರ ಹೆಸರನ್ನು ಗುಣಗಾನ ಮಾಡುವಂತಹ ಉತ್ತಮ ದಿನಗಳು ಬಂದಿವೆ. ಆದ್ದರಿಂದ ಮಹಿಳೆಯರು ಬಿಜೆಪಿ ಅಭ್ಯರ್ಥಿಗೆ ಮತ ನೀಡುವುದಷ್ಟೇ ಅಲ್ಲದೆ, ಇತರ ಮಹಿಳೆಯರಿಂದಲೂ ಮತಹಾಕಿಸಿ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.