ಮೈಸೂರು: ‘ನನಗೆ ಇವಿಎಂ (ಮತಯಂತ್ರ) ಮೇಲೆ ಮೊದಲಿನಿಂದಲೂ ಅನುಮಾನ ಇದೆ. ಕೆಲವು ರಾಜ್ಯಗಳಲ್ಲಿ ಮತಯಂತ್ರಗಳನ್ನು ತಿರುಚಿರುವ ಸಾಧ್ಯತೆ ಇದೆ’ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಆರೋಪಿಸಿದರು.
ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಎಲ್ಲ ರಾಜ್ಯಗಳಲ್ಲೂ ಮತಯಂತ್ರಗಳನ್ನು ತಿರುಚುವುದಿಲ್ಲ. ಅನುಮಾನ ಬಾರದಿರಲಿ ಎಂದು ಕೆಲವು ಆಯ್ದ ರಾಜ್ಯಗಳಲ್ಲಿ ಈ ಕೆಲಸ ಮಾಡುತ್ತಾರೆ’ ಎಂದು ಹೇಳಿದರು.
‘ರಾಜ್ಯದಲ್ಲಿ ನಮಗೆ 16 ರಿಂದ 18 ಸ್ಥಾನಗಳು ಸಿಗಬೇಕು. ಆದರೆ, ಸಮೀಕ್ಷೆಯಲ್ಲಿ ನಮಗೆ 3 ರಿಂದ 5 ಸ್ಥಾನಗಳನ್ನು ತೋರಿಸಿದ್ದಾರೆ. ನನಗೆ ನಂಬಲು ಆಗುತ್ತಿಲ್ಲ. 24 ಕ್ಷೇತ್ರಗಳಲ್ಲಿ ಓಡಾಡಿ ಪ್ರಚಾರ ಮಾಡಿದ್ದೇನೆ. ವಸ್ತುಸ್ಥಿತಿ ಹೇಗಿದೆ ಎಂಬುದು ನನಗೆ ತಿಳಿದಿದೆ. ಮತಗಟ್ಟೆ ಸಮೀಕ್ಷೆಗಳು ಅಂದಾಜು ಮಾಡಿರುವ ಪ್ರಕಾರ ಫಲಿತಾಂಶ ಬಂದರೆ ಇವಿಎಂ ಮೇಲೆ ಸಂಶಯ ವ್ಯಕ್ತಪಡಿಸಬೇಕಾಗುತ್ತದೆ’ ಎಂದರು.
ಶಾಸಕ ರೋಷನ್ ಬೇಗ್ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿ, ‘ಅವರಿಗೆ ಮಂತ್ರಿ ಸ್ಥಾನ ಸಿಗಲಿಲ್ಲ. ಲೋಕಸಭೆ ಚುನಾವಣೆಗೂ ಟಿಕೆಟ್ ದೊರೆಯಲಿಲ್ಲ. ಅಧಿಕಾರದ ದಾಹ ಇದ್ದರೆ ಈ ರೀತಿ ಅಸಮಾಧಾನ ಆಗುತ್ತದೆ. ಪಕ್ಷವು ಅವರ ವಿರುದ್ಧ ಕ್ರಮ ಕೈಗೊಳ್ಳಲಿದೆ’ ಎಂದು ತಿಳಿಸಿದರು.
‘ದುರಹಂಕಾರಿ ಅಲ್ಲ’:‘ನನ್ನದು ಹಳ್ಳಿ ಭಾಷೆ. ಒರಟಾಗಿ, ನೇರವಾಗಿ ಮಾತನಾಡುತ್ತೇನೆ. ಇದು ಕೆಲವರಿಗೆ ಹಿಡಿಸಲ್ಲ. ಅದಕ್ಕೆ ಸಿದ್ದರಾಮಯ್ಯ ದುರಹಂಕಾರಿ ಎಂದು ಟೀಕಿಸುತ್ತಾರೆ. ನಾನು ಯಾರೊಂದಿಗೂ ದುರಹಂಕಾರದಿಂದ ವರ್ತಿಸಿಲ್ಲ’ ಎಂದು ಸಿದ್ದರಾಮಯ್ಯ ಅವರು ರೋಷನ್ ಬೇಗ್ ಅವರಿಗೆ ತಿರುಗೇಟು ನೀಡಿದರು.
ಸ್ವಾಭಿಮಾನ ಮತ್ತು ನಿಷ್ಠುರವಾಗಿ ಮಾತನಾಡುವವರು ದುರಹಂಕಾರಿಗಳಂತೆ ಕಾಣಿಸುತ್ತಾರೆ. ಅಂತಹ ಟೀಕೆಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದರು.
ಇದನ್ನೂ ಓದಿ:ಇವಿಎಂ: ತನಿಖೆಗೆ ಮುನಿಯಪ್ಪ ಒತ್ತಾಯ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.