ಕಲಬುರ್ಗಿ: ‘ಮಾಜಿ ಸಚಿವ ಬಾಬುರಾವ್ ಚವಾಣ್ ಅವರು ಬಿಜೆಪಿ ತೊರೆದಿರುವುದರಿಂದ ಬಂಜಾರ ಸಮುದಾಯದ ಮತಗಳು ವಿಭಜನೆ ಆಗುವುದಿಲ್ಲ’ ಎಂದು ‘ಗುಲಬರ್ಗಾ’ ಲೋಕಸಭಾ ಕ್ಷೇತ್ರದ ಬಿಜೆಪಿ ನಿಯೋಜಿತ ಅಭ್ಯರ್ಥಿ ಡಾ.ಉಮೇಶ ಜಾಧವ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಂಜಾರ ಸಮುದಾಯದ ಮತದಾರರು ಬಹಳ ಪ್ರಬುದ್ಧರಿದ್ದಾರೆ. ಬಾಬುರಾವ್ ಅವರಿಗೆ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಸ್ಥಾನವನ್ನು ಕೊಟ್ಟಿತ್ತು. ಬಂಜಾರ ಸಮುದಾಯದವರಿಗೆ ಇಷ್ಟು ಉನ್ನತ ಹುದ್ದೆಯನ್ನು ಯಾರೂ ನೀಡಿರಲಿಲ್ಲ. ಬಾಬುರಾವ್ ರಾಜೀನಾಮೆ ನೀಡಿದ್ದಾರೆ ಅಷ್ಟೆ. ಆದರೆ, ಇನ್ನೂ ಯಾವುದೇ ಪಕ್ಷಕ್ಕೆ ಸೇರಿಲ್ಲ. ಎಲ್ಲರೂ ಒಗ್ಗೂಡಿ ಕೆಲಸ ಮಾಡೋಣ ಎಂದು ಅವರಲ್ಲಿ ಮನವಿ ಮಾಡುತ್ತೇವೆ’ ಎಂದರು.
‘ಜಾಧವ್ ಪರ ಪ್ರಚಾರ ಮಾಡದಂತೆ ಬಾಬುರಾವ್ ಚಿಂಚನಸೂರು ಅವರಿಗೆ ಜೀವಬೆದರಿಕೆ ಹಾಕಿದ್ದಾರಂತಲ್ಲ’ ಎಂಬ ಪ್ರಶ್ನೆಗೆ, ‘ಪ್ರಜಾಪ್ರಭುತ್ವದಲ್ಲಿ ಯಾರೂ ಯಾರಿಗೂ ಹೆದರಿಸುವ ಕೆಲಸ ಮಾಡಬಾರದು. ನಾನು ಈಗಾಗಲೇ ಬಿ ಫಾರಂ ತಂದಿದ್ದೇನೆ. ಪಕ್ಷದ ಎಲ್ಲ ನಾಯಕರ ಜತೆ ಚರ್ಚಿಸಿ ನಾಮಪತ್ರ ಸಲ್ಲಿಕೆ ದಿನಾಂಕ ನಿಗದಿ ಮಾಡುತ್ತೇನೆ’ ಎಂದು ತಿಳಿಸಿದರು.
‘ಶಾಸಕ ಸ್ಥಾನದ ರಾಜೀನಾಮೆ ಅಂಗೀಕಾರಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಅಧ್ಯಕ್ಷ ಕೆ.ಆರ್.ರಮೇಶಕುಮಾರ್ ಅವರು ಮಾ.25ರಂದು 45 ನಿಮಿಷ ವಿಚಾರಣೆ ನಡೆಸಿದ್ದಾರೆ. ಇದೇ ಮೊದಲ ಬಾರಿಗೆ ಮತದಾರರ ಅಭಿಪ್ರಾಯ ಆಲಿಸಿದ್ದಾರೆ. ಕಾನೂನು ಪ್ರಕಾರ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.