ADVERTISEMENT

ಕವಿ ಹೃದಯದ ಪ್ರಧಾನಿ –ಸಂಸದ

ಜಿ.ಬಿ.ಹರೀಶ
Published 17 ಮಾರ್ಚ್ 2014, 19:30 IST
Last Updated 17 ಮಾರ್ಚ್ 2014, 19:30 IST

ತಮ್ಮ ದೀರ್ಘ ಕಾಲದ ರಾಜಕೀಯ ಜೀವನ­ದಲ್ಲಿ ಅನೇಕ ವಿಶೇ­ಷತೆಗಳನ್ನು ಹೊಂದಿರುವ ಸಂಸದರಲ್ಲಿ ಅಟಲ್ ಬಿಹಾರಿ ವಾಜಪೇಯಿ ಒಬ್ಬರು. ಲೋಕಸಭೆಗೆ ಒಂಬತ್ತು ಸಲ, ರಾಜ್ಯ ಸಭೆಗೆ ಎರಡು ಸಲ ಗೆದ್ದು ಬಂದ ಅವರು ಮೊದಲಿ­ನಿಂದಲೂ ಸೈದ್ಧಾಂತಿಕ ರಾಜಕೀಯದಲ್ಲಿ ವಿಶ್ವಾಸವಿರಿಸಿದವರು.

ಆರೆಸ್ಸೆಸ್ ಹಿನ್ನೆಲೆ­ಯ ವಾಜಪೇಯಿ, ಅದರ ಅಂಗ ಸಂಸ್ಥೆ ಜನಸಂಘ­ದಲ್ಲಿ ಮೊದಲು ಸೇವೆ ಸಲ್ಲಿಸಿದರು. ಜನಸಂಘದ ಸ್ಥಾಪಕ ಡಾ.ಶಾಮಾ ಪ್ರಸಾದ್ ಮುಖರ್ಜಿ ಅವರ ಒಡನಾಡಿಯಾಗಿದ್ದ ಅವರು ಕಾಶ್ಮೀರ ಕುರಿತ ಹೋರಾಟದಲ್ಲಿ ಭಾಗವಹಿಸಿದ್ದರು. 1957ರಲ್ಲಿ ಲೋಕಸಭೆಗೆ ಮೊದಲ ಸಲ ಬಲರಾಂಪುರದಿಂದ ಆಯ್ಕೆಯಾದರು. ಉತ್ತರಪ್ರದೇಶ, ದೆಹಲಿ, ಮಧ್ಯ­ಪ್ರದೇಶ,ಗುಜರಾತಿನಿಂದ ಆಯ್ಕೆಯಾದ ಏಕೈಕ ಸಂಸದೀಯ ಪಟು ಅವರು.

1996­ರಿಂದ 2004ರವರೆಗೆ ವಾಜಪೇಯಿ ಅವರು ಮೂರು ಸಲ ಭಾರತದ ಪ್ರಧಾನಿಯಾಗಿದ್ದರು. ಅವರ ಪ್ರಧಾನಿ ಅವಧಿಯಲ್ಲಿ ಭಾರತ –ಪಾಕಿಸ್ತಾನದ ನಡುವಿನ ಸಂಬಂಧ ಸುಧಾರಿಸುವ ಪ್ರಯತ್ನಗಳು ನಡೆದು, ದೆಹಲಿ–ಲಾಹೋರ್ ನಡುವೆ ಬಸ್ ಸಂಚಾರ ಆರಂಭ­ವಾಯಿತು.

2002ರಲ್ಲಿ ಗುಜರಾತಿನಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಹಿಂದು–ಮುಸ್ಲಿಂ ಹಿಂಸಾಚಾರವನ್ನು ಬಹಿರಂಗವಾಗಿ ಖಂಡಿಸಿದ ಪ್ರಧಾನಿ ವಾಜಪೇಯಿ, ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ರಾಜಧರ್ಮ ಪಾಲಿಸಲು ಸೂಚಿಸಿದ್ದರು.

ವಾಜಪೇಯಿ ಅವರನ್ನು ರಾಜ್ಯ ಸಭೆಯಲ್ಲಿ ಹಾಲಿ ಪ್ರಧಾನಿ ಮನಮೋಹನ ಸಿಂಗ್ ಭಾರತೀಯ ರಾಜಕೀಯದ ಭೀಷ್ಮ ಪಿತಾಮಹ ಎಂದು ಹೊಗಳಿದ್ದರು. ಮೊದಲ ಸಲ ಲೋಕಸಭೆಗೆ ಆಯ್ಕೆಯಾದ ಅವರು ಮಾಡಿದ ಭಾಷಣವನ್ನು ಮೆಚ್ಚಿದ್ದ ನೆಹರೂ, ಮುಂದೆ ವಾಜಪೇಯಿ ಭಾರತದ ಪ್ರಧಾನಿಯಾಗುವರು ಎಂದು ‘ಭವಿಷ್ಯ’ ನುಡಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT