ಮಹುವಾ ಮೊಯಿತ್ರಾ (ತೃಣಮೂಲ ಕಾಂಗ್ರೆಸ್)
ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿಗೆ ಸಂಸತ್ನಲ್ಲಿ ಟೀಕಾಪ್ರಹಾರಗಳನ್ನು ಮಾಡುತ್ತಾ ಸದಾ ಬಿಜೆಪಿಯವರ ಕೆಂಗಣ್ಣಿಗೆ ಗುರಿಯಾಗುತ್ತಿದ್ದ ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ ಅವರು ಈ ಬಾರಿಯೂ ಪಶ್ಚಿಮಬಂಗಾಳದ ಕೃಷ್ಣನಗರ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಧುಮುಕಿದ್ದಾರೆ. ಕಳೆದ ಬಾರಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು 6,14,872 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಬಿಜೆಪಿಯ ಕಲ್ಯಾಣ್ ಚೌಬೆ ಅವರನ್ನು ಪರಾಭವಗೊಳಿಸಿದ್ದರು. ಟಿಎಂಸಿಯ ದಿಟ್ಟ ನಾಯಕಿಯೆಂದೇ ಬಿಂಬಿತವಾಗಿರುವ ಅವರನ್ನು ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದ ಪ್ರಕರಣದಲ್ಲಿ, ಸಂಸತ್ತಿನ ನೀತಿ ಸಮಿತಿಯು ದೋಷಿ ಎಂದು ಹೇಳಿತ್ತು. ಬಳಿಕ ಅವರನ್ನು ಉಚ್ಚಾಟನೆ ಮಾಡಲಾಗಿತ್ತು. ಮಹುವಾ ಅವರ ಬೆನ್ನಿಗೆ ನಿಂತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಯಾವ ಟೀಕೆಗಳಿಗೂ ತಲೆಕೆಡಿಸಿಕೊಳ್ಳದೆ ಅವರನ್ನು ಮತ್ತೆ ಅಖಾಡಕ್ಕಿಳಿಸಿದ್ದಾರೆ.
ಅಮೃತಾ ರಾಯ್(ಬಿಜೆಪಿ)
ಮಹುವಾ ಅವರಂತಹ ಪ್ರಬಲ ಅಭ್ಯರ್ಥಿಯನ್ನು ಮಣಿಸಲು ಬಿಜೆಪಿಯು ‘ರಾಜ್ಬರಿಯ ರಾಜಮಾತೆ’ ಅಮೃತಾ ರಾಯ್ ಅವರನ್ನು ಕಣಕ್ಕಿಳಿಸಿದೆ. ರಾಜಕೀಯದಲ್ಲಿ ಅನನುಭವಿಯಾದರೂ ರಾಜವಂಸ್ಥೆಯಾಗಿರುವ ಕಾರಣ ಅವರು ಈ ಕ್ಷೇತ್ರದಲ್ಲಿ ಚಿರಪರಿಚಿತರು. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಇತಿಹಾಸವಿರುವ ನಾಡಿಯಾದ ಕೃಷ್ಣನಗರದ ರಾಜವಂಶಕ್ಕೆ ಸೇರಿದ ಮಹಾರಾಜ ಕೃಷ್ಣಚಂದ್ರ ರಾಯ್ ಅವರ ಕುಟುಂಬಸ್ಥರಾದ ಅಮೃತಾ, ಈಚೆಗಷ್ಟೇ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ರಾಜವಂಶಸ್ಥೆ ಅಖಾಡಕ್ಕಿಳಿದಿರುವುದರಿಂದ ಸ್ಪರ್ಧಾ ಕಣವು ಕುತೂಹಲ ಮೂಡಿಸಿದೆ. ಮಹುವಾ ಅವರನ್ನು ಈ ಬಾರಿ ಸೋಲಿಸಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ನಾಯಕರು ಸ್ಥಳೀಯವಾಗಿ ಸಾಕಷ್ಟು ಪ್ರಭಾವಿರುವ ಅಮೃತಾರನ್ನು ಪಕ್ಷಕ್ಕೆ ಸೆಳೆದು ಅಭ್ಯರ್ಥಿಯಾಗಿಸಿದ್ದಾರೆ. ರಾಜ ಕುಟುಂಬದ ಬಗ್ಗೆ ಸ್ಥಳೀಯರಿಗಿರುವ ಗೌರವವು ಮತವಾಗಿ ಪರಿವರ್ತನೆಯಾಗಬಹುದು ಎಂಬುದು ಕಮಲ ಪಕ್ಷದ ಲೆಕ್ಕಾಚಾರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.