ನವದೆಹಲಿ: ಚುನಾವಣಾ ಬಾಂಡ್ ಖರೀದಿಸುವವರ ಗುರುತು ಬಹಿರಂಗ ಆಗುವುದಿಲ್ಲ ಎಂದಾದರೆ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿಕೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದ ಈ ವ್ಯವಸ್ಥೆಯೇ ವ್ಯರ್ಥ. ಚುನಾವಣೆಯಲ್ಲಿ ಕಪ್ಪುಹಣ ಬಳಕೆಯನ್ನು ತಡೆಯುವುದಕ್ಕಾಗಿ ಜಾರಿಗೆ ತಂದಿರುವ ವ್ಯವಸ್ಥೆಯ ಉದ್ದೇಶವೇ ಈಡೇರದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಚುನಾವಣಾ ಬಾಂಡ್ ಯೋಜನೆಯನ್ನು ಪ್ರಶ್ನಿಸಿ ಎನ್ಜಿಒಯೊಂದು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ತೀರ್ಪನ್ನು ಕಾಯ್ದಿರಿಸಿದೆ.
ರಾಜಕಾರಣದಲ್ಲಿ ಕಪ್ಪು ಹಣ ಚಲಾವಣೆಯನ್ನು ಪತ್ತೆಹಚ್ಚಲು ಚುನಾವಣಾ ಬಾಂಡ್ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯೊ ನೇತೃತ್ವದ ಪೀಠಕ್ಕೆ ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.
‘ಪ್ರಜಾಪ್ರಭುತ್ವ ವ್ಯವಸ್ಥೆಗೆಕಪ್ಪುಹಣ ಒಂದು ರೋಗವಿದ್ದಂತೆ. ಚುನಾವಣಾ ಬಾಂಡ್ ಮೂಲಕ ಕಪ್ಪುಹಣ ತಡೆಗೆ ಕ್ರಮ ಕೈಗೊಳ್ಳಲಾಗಿದೆ. ಯಾರು ಬಾಂಡ್ ಖರೀದಿಸುತ್ತಾರೋ ಅವರು ಕೆವೈಸಿ ಅರ್ಜಿ ಭರ್ತಿ ಮಾಡಬೇಕು. ರಾಜಕೀಯ ಪಕ್ಷಗಳು ಒಂದು ಬ್ಯಾಂಕ್ನಿಂದ ಮಾತ್ರ ಈ ಹಣ ಪಡೆದುಕೊಳ್ಳಬಹುದು’ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು ಮಾಹಿತಿ ನೀಡಿದರು.
‘ಹಿಂದಿನ ವ್ಯವಸ್ಥೆಗೆ ಹೋಲಿಸಿದರೆ, ಇದು ಅತ್ಯುತ್ತಮ ಕ್ರಮ. ಇದು ಎಷ್ಟು ದಿನ ಚಾಲ್ತಿಯಲ್ಲಿರುತ್ತದೆ ಎಂದು ಕಾಲವೇ ಹೇಳಬೇಕು’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.