ADVERTISEMENT

ಹೇಮಾವತಿ ನೀರು ತುಮಕೂರಿಗೆ ಬಿಡಬೇಡಿ ಎಂದು ರೇವಣ್ಣ ದರ್ಪ: ಅರವಿಂದ ಲಿಂಬಾವಳಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 10:46 IST
Last Updated 13 ಏಪ್ರಿಲ್ 2019, 10:46 IST
   

ತುಮಕೂರು: ‘ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಸರಿಯಾಗಿ ಹರಿಯದೇ ಇರಲು ಎಚ್.ಡಿ.ರೇವಣ್ಣನೇ ಕಾರಣ’ ಎಂದು ಶಾಸಕ ಅರವಿಂದ ಲಿಂಬಾವಳಿ ಆರೋಪಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,‘ ನಾನು ಹಾಸನ ಜಿಲ್ಲೆಯ ಉಸ್ತುವರಿ ಸಚಿವನಾಗಿದ್ದ ವೇಳೆ, ಸಚಿವ ಎಚ್.ಡಿ.ರೇವಣ್ಣ ಹೇಮಾವತಿ ನೀರನ್ನು ತುಮಕೂರಿಗೆ ಬಿಡಬಾರದು ಎಂದು ಹೇಳುವ ಮೂಲಕ ಅಧಿಕಾರಿಗಳ ಮೇಲೆ ದರ್ಪ ಮಾಡುತ್ತಿದ್ದರು' ಎಂದು ಆರೋಪ ಮಾಡಿದರು.

‘ರೇವಣ್ಣ ನಡೆಯಿಂದ ಜಿಲ್ಲೆಗೆ ಹೇಮಾವತಿ ನೀರು ಸರಿಯಾಗಿ ಹರಿಯುತ್ತಿರಲಿಲ್ಲ. ನೀರು ಬಿಟ್ಟಿದ್ದಕ್ಕೆ ದಾಖಲೆ ಇರುತ್ತಿತ್ತು. ಆದರೆ, ನೀರು ಏಕೆ ತುಮಕೂರಿಗೆ ಹರಿದಿಲ್ಲ ಎಂಬ ಬಗ್ಗೆ ಯಾವುದೇ ದಾಖಲಾತಿ ಇರುತ್ತಿರಲಿಲ್ಲ’ ಎಂದು ಹೇಳಿದರು.

ADVERTISEMENT

'ತುಮಕೂರಿಗೆ ಬರುವ ನೀರನ್ನು ಮಧ್ಯೆದಲ್ಲೇ ತಡೆದು ಹಾಸನದ ನಾನಾ ಭಾಗಗಳಿಗೆ ಹರಿಸಿ, ದುರ್ಬಳಕೆ ಮಾಡಲಾಗುತ್ತಿತ್ತು. ಇದನ್ನು ರೇವಣ್ಣ ವ್ಯವಸ್ಥಿತವಾಗಿ ನಡೆಸುತ್ತಿದ್ದರು. ಈ ಬಗ್ಗೆ ನೇರವಾಗಿ ರೇವಣ್ಣ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದರು' ಎಂದು ರೇವಣ್ಣರ ಮೇಲೆ ನೇರವಾಗಿ ಆರೋಪ ಮಾಡಿದರು.

ದೇವೇಗೌಡರಿಗೆ ಅಧಿಕಾರದ ದುರಾಸೆ

'ದೇವೇಗೌಡ ಅವರು ಹಾಸನ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳನ್ನು ತಮ್ಮ ಮೊಮ್ಮಕ್ಕಳಾದ ಪ್ರಜ್ವಲ್ ಮತ್ತು ನಿಖಿಲ್ ಗೆ ಬಿಟ್ಟುಕೊಟ್ಟು ತುಮಕೂರಿಗೆ ಏಕೆ ಬಂದರು. ಅವರಿಗೆ ಇನ್ನೂ ಕುಟುಂಬ ರಾಜಕಾರಣದ ದುರಾಸೆ ಇದೆ. ಈ ನಡೆ ಅವರ ಅಧಿಕಾರದ ಆಸೆ, ದುರಾಸೆಯನ್ನು ತೋರಿಸುತ್ತಿದೆ' ಎಂದು ಟೀಕಿಸಿದರು.

ಏ.16ರಂದು ಅಮಿತ್ ಶಾ ರೋಡ್ ಶೋ: 'ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜ್ ಪರ ರಾಷ್ಟ್ರ ಹಾಗೂ ರಾಜ್ಯ ನಾಯಕರು ಪ್ರಚಾರಕ್ಕೆ ಬರುತ್ತಾರೆ. ಬಿಜೆಪಿ ಪಕ್ಷ ಅವರ ಜೊತೆಯಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಏ.16 ರಂದು ತುಮಕೂರಿಗೆ ಬಂದು ರೋಡ್ ಶೋ ಮೂಲಕ ಪ್ರಚಾರ ಮಾಡಲಿದ್ದಾರೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.