ADVERTISEMENT

ಪಕ್ಷದ ಅಭ್ಯರ್ಥಿ ವಿರುದ್ಧವೇ ಕಾಂಗ್ರೆಸ್ ಪ್ರಚಾರ

ಪಿಟಿಐ
Published 24 ಏಪ್ರಿಲ್ 2024, 23:26 IST
Last Updated 24 ಏಪ್ರಿಲ್ 2024, 23:26 IST
...
...   

ಬನ್ಸ್ವಾರ: ರಾಜಸ್ಥಾನದ ಆದಿವಾಸಿಗಳ ಪ್ರಾಬಲ್ಯದ ಬನ್ಸ್ವಾರ–ದುಂಗರ್‌ಪುರ್ ಲೋಕಸಭಾ ಕ್ಷೇತ್ರದಲ್ಲಿ ವಿಚಿತ್ರ ಪೈಪೋಟಿ ನಡೆಯುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡದಂತೆ ಆ ಪಕ್ಷವೇ ಪ್ರಚಾರ ಮಾಡುತ್ತಿದೆ.

ಅದರ ಹಿನ್ನೆಲೆ ಕುತೂಹಲಕರವಾಗಿದೆ. ಕಾಂಗ್ರೆಸ್ ಪಕ್ಷವು ಅರವಿಂದ್ ದಾಮೋರ್ ಅವರನ್ನು ಕಣಕ್ಕಿಳಿಸಿತ್ತು. ಆದಾಗ್ಯೂ ಕೊನೆಯ ಗಳಿಗೆಯಲ್ಲಿ, ಸಾಕಷ್ಟು ಸಮಾಲೋಚನೆಯ ನಂತರ, ನಾಮಪತ್ರ ಹಿಂತೆಗೆದುಕೊಳ್ಳಲು ಇನ್ನು ಒಂದು ದಿನ ಬಾಕಿ ಇದೆ ಎನ್ನುವಾಗ ಕಾಂಗ್ರೆಸ್ ಪಕ್ಷವು, ಭಾರತ್ ಆದಿವಾಸಿ ಪಕ್ಷದ (ಬಿಎಪಿ) ಅಭ್ಯರ್ಥಿಯನ್ನು ಬೆಂಬಲಿಸಲು ತೀರ್ಮಾನಿಸಿತು.

ನಾಮಪತ್ರ ಹಿಂಪಡೆಯುವಂತೆ ಕಾಂಗ್ರೆಸ್ ತನ್ನ ಅಭ್ಯರ್ಥಿಗೆ ಸೂಚಿಸಿತು. ಆದರೆ, ಪಕ್ಷದ ನಿರ್ದೇಶನದ ಹೊರತಾಗಿಯೂ ದಾಮೋರ್ ಅವರು ನಾಮಪತ್ರ ಹಿಂಪಡೆಯುವ ಗಳಿಗೆ ಅಂತ್ಯವಾಗುವವರೆಗೆ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ನಂತರ ಮಾಧ್ಯಮಗಳ ಮುಂದೆ ಪ್ರತ್ಯಕ್ಷವಾದ ದಾಮೋರ್ ನಡೆದ ಘಟನಾವಳಿಗಳ ಬಗ್ಗೆ ತನಗೇನೂ ಗೊತ್ತಿಲ್ಲ ಎಂದಿದ್ದಲ್ಲದೇ, ತಾನು ಚುನಾವಣಾ ಕಣದಲ್ಲಿ ಉಳಿಯುವುದಾಗಿ ಘೋಷಿಸಿದರು.

ADVERTISEMENT

ಇದರಿಂದಾಗಿ ಬಿಜೆಪಿ ಮತ್ತು ಕಾಂಗ್ರೆಸ್–ಬಿಎಪಿ ನಡುವಣ ನೇರ ಹಣಾಹಣಿಯಾಗಬೇಕಿದ್ದ ಚುನಾವಣೆಯಲ್ಲಿ ಈಗ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ದಾಮೋರ್‌ ಅವರ ಸ್ಪರ್ಧೆಯಿಂದಾಗಿ ಕಾಂಗ್ರೆಸ್‌ನ ಮತಗಳು ವಿಭಜನೆಯಾದರೆ, ಬಿಜೆಪಿ ಅಭ್ಯರ್ಥಿ ಮಹೇಂದ್ರಜಿತ್‌ ಸಿಂಗ್‌ ಅವರು ಗೆಲುವಿನ ನಗೆ ಬೀರುವ ಸಾಧ್ಯತೆಯಿದೆ.

‘ಕಾಂಗ್ರೆಸ್‌ ಅಭ್ಯರ್ಥಿಗೆ (ದಾಮೋರ್‌) ಮತ ಹಾಕದಂತೆ ನಾವು ಜನರಿಗೆ ಮನವಿ ಮಾಡುತ್ತಿದ್ದೇವೆ’ ಎಂದು ಪಕ್ಷದ ಸ್ಥಳೀಯ ಮುಖಂಡರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.