ರಾಹುಲ್ ಗಾಂಧಿ
ಭಾಗಲ್ಪುರ (ಬಿಹಾರ): ದಲಿತರು, ಮುಸ್ಲಿಮರು ಮತ್ತು ಬಡವರ ಪಾಲಿಗೆ ಸರ್ವಸ್ವವೂ ಆಗಿರುವ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಬಿಜೆಪಿ–ಆರ್ಎಸ್ಎಸ್ ಕೂಟ ಮತ್ತು ಬೆರಳೆಣಿಕೆಯ ಕುಬೇರರು ಅಪಾಯಕಾರಿಯಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಆರೋಪಿಸಿದ್ದಾರೆ.
ಬಿಹಾರದ ಭಾಗಲ್ಪುರದಲ್ಲಿ ಚುನಾವಣಾ ರ್ಯಾಲಿ ನಡೆಸಿದ ಅವರು, ‘ದೇಶದ 22 ಮಂದಿ ಶ್ರೀಮಂತರು, 70 ಕೋಟಿ ಜನರಿಗೆ ಸಮನಾದ ಸಂಪತ್ತು ಹೊಂದಿದ್ದಾರೆ. 70 ಕೋಟಿ ಮಂದಿಯು ದಿನಕ್ಕೆ ಕೇವಲ ₹100 ವೆಚ್ಚದಲ್ಲಿ ಬದುಕುತ್ತಿದ್ದಾರೆ. ಸುಮಾರು 25 ಶ್ರೀಮಂತರ ₹16 ಲಕ್ಷ ಕೋಟಿ ಸಾಲವನ್ನು ಮೋದಿ ಸರ್ಕಾರ ಮನ್ನಾ ಮಾಡಿತು. ಅದು ಕಾಂಗ್ರೆಸ್ ಸರ್ಕಾರ ಮನ್ನಾ ಮಾಡಿದ್ದ ರೈತರ ಸಾಲಕ್ಕಿಂತ 25 ಪಟ್ಟು ಹೆಚ್ಚಿನ ಮೊತ್ತ. ಅದು 25 ವರ್ಷಗಳ ನರೇಗಾ ವೆಚ್ಚಕ್ಕೆ ಸಮ’ ಎಂದು ಹೇಳಿದರು.
‘ಅವರು ಸಂವಿಧಾನವನ್ನು ಬದಲಾಯಿಸಿದರೆ ಬಡವರು, ತಳಸ್ತರದವರು ಇದುವರೆಗೆ ಏನು ಅಭಿವೃದ್ಧಿ ಹೊಂದಿದ್ದರೋ, ಅದು ಕೊನೆಗೊಳ್ಳಲಿದೆ’ ಎಂದರು.
‘ಜನಾಂಗೀಯವಾದಿ, ದಬ್ಬಾಳಿಕೆಯ ಸರ್ಕಾರ’ (ತ್ರಿಶ್ಯೂರ್ ವರದಿ): ಕೇಂದ್ರದ ಬಿಜೆಪಿ ಸರ್ಕಾರವು ಫ್ಯಾಸಿಸ್ಟ್, ಜನಾಂಗೀಯವಾದಿ ಹಾಗೂ ದಬ್ಬಾಳಿಕೆಯ ಸರ್ಕಾರವಾಗಿದ್ದು, ‘ಸ್ವಾತಂತ್ರ್ಯ ಹೋರಾಟಗಾರರ ರಕ್ತದಿಂದ ಬರೆಯಲಾಗಿರುವ’ ಸಂವಿಧಾನವನ್ನು ಬದಲಾಯಿಸುವ ಬಗ್ಗೆ ಅಹಂಕಾರದಿಂದ ಮಾತನಾಡುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಶನಿವಾರ ವಾದ್ರಾ ವಾಗ್ದಾಳಿ ನಡೆಸಿದರು.
‘ಬಿಜೆಪಿ ಸರ್ಕಾರವು ಪ್ರಧಾನಿಯ ‘ಏಕಸ್ವಾಮ್ಯ ಹೊಂದಿದ ಸ್ನೇಹಿತರ’ ಲಾಭಕ್ಕಾಗಿ ಕೆಲಸ ಮಾಡುತ್ತಿದ್ದು, ಅತ್ಯಾಚಾರಿಗಳು ಮತ್ತು ಮಹಿಳೆಯರ ಮೇಲೆ ದಬ್ಬಾಳಿಕೆ ಮಾಡುವವರನ್ನು ರಕ್ಷಿಸುತ್ತಿದೆ. ಚುನಾವಣಾ ಬಾಂಡ್ಗಳಿಂದ ಹಣ ವಸೂಲಿ ಮಾಡುತ್ತಿದ್ದು, ಸರ್ಕಾರದ ಸಂಸ್ಥೆಗಳನ್ನು ಬಳಸಿ ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುತ್ತಿದೆ. ನ್ಯಾಯಾಂಗವನ್ನೂ ಬೆದರಿಸುತ್ತಿದೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.