ಮುಂಬೈ: ಮಹಾವಿಕಾಸ ಅಘಾಡಿಯು (ಎಂವಿಎ) ಪ್ರಕಾಶ್ ಅಂಬೇಡ್ಕರ್ ನೇತೃತ್ವದ ವಂಚಿತ್ ಬಹುಜನ್ ಅಘಾಡಿ (ವಿಬಿಎ) ಜತೆಗೆ ಸ್ಥಾನ ಹಂಚಿಕೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸಲು ಇನ್ನೂ ಆಸಕ್ತಿ ಹೊಂದಿದೆ ಎಂದು ಶಿವಸೇನಾ (ಯುಬಿಟಿ) ಮುಖಂಡ ಸಂಜಯ್ ರಾವತ್ ಮಂಗಳವಾರ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್, ಎನ್ಸಿಪಿ (ಶರದ್ ಪವಾರ್ ಬಣ) ಮತ್ತು ಶಿವಸೇನಾ (ಯುಬಿಟಿ) ಪಕ್ಷಗಳನ್ನೊಳಗೊಂಡ ಎಂವಿಎ ಜತೆಗೆ ಪ್ರಕಾಶ್ ಅಂಬೇಡ್ಕರ್ ಮೈತ್ರಿ ಮಾತುಕತೆ ನಡೆಸುತ್ತಿದ್ದರು. ಅದರ ನಡುವೆಯೇ ಪ್ರಕಾಶ್ ಇತ್ತೀಚೆಗೆ ಮಹಾರಾಷ್ಟ್ರದ 48 ಸ್ಥಾನಗಳ ಪೈಕಿ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದರು.
2019ರ ಲೋಕಸಭಾ ಚುನಾವಣೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಎನ್ಸಿಪಿ (ಅವಿಭಜಿತ) ಎರಡನೇ ಸ್ಥಾನ ಪಡೆದಿದ್ದರೆ, ವಿಬಿಎ ಮೂರನೇ ಸ್ಥಾನ ಪಡೆದಿತ್ತು. ಅದರಿಂದ ಮತ ವಿಭಜನೆಯಾಗಿ ಬಿಜೆಪಿ ಮತ್ತು ಶಿವಸೇನಾ (ಅವಿಭಜಿತ) ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.
ಐದು ಕ್ಷೇತ್ರಗಳಿಗೆ ಪ್ರಸ್ತಾವವಿಟ್ಟಿದ್ದ ಪ್ರಕಾಶ್ ಅಂಬೇಡ್ಕರ್ ಅವರ ಪಕ್ಷವು ಎಂವಿಎ ಜತೆಗೆ ಮಾತುಕತೆ ಸ್ಥಗಿತಗೊಳಿಸಿತು. ‘ನಾವು ಈಗಲೂ ಅವರ ಜತೆಗೆ ಚರ್ಚೆ ನಡೆಸಲು ಸಿದ್ಧರಿದ್ದೇವೆ’ ಎಂದು ರಾವತ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.